ADVERTISEMENT

ಹುಬ್ಬಳ್ಳಿ: ರೈಲ್ವೆ ಹಳಿಗೆ ಸಿಲುಕಿ ಹೆಚ್ಚಿದ ಸಾವು–ನೋವು

ಕಳೆದ ಮೂರು ವರ್ಷಗಳಲ್ಲಿ 360ಕ್ಕೂ ಹೆಚ್ಚು ಜನ ಸಾವು: ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು

ಶಿವರಾಯ ಪೂಜಾರಿ
Published 10 ಫೆಬ್ರುವರಿ 2025, 5:04 IST
Last Updated 10 ಫೆಬ್ರುವರಿ 2025, 5:04 IST
ರೈಲ್ವೆ ಕ್ರಾಸಿಂಗ್‌ ವೇಳೆ ಗೇಟ್ ಹಾಕಿದ್ದರೂ ಮಹಿಳೆಯರು ಹಳಿ ದಾಟುವ ದೃಶ್ಯ
ರೈಲ್ವೆ ಕ್ರಾಸಿಂಗ್‌ ವೇಳೆ ಗೇಟ್ ಹಾಕಿದ್ದರೂ ಮಹಿಳೆಯರು ಹಳಿ ದಾಟುವ ದೃಶ್ಯ   

ಹುಬ್ಬಳ್ಳಿ: ದೇಶದಲ್ಲೇ ಅತೀ ದೊಡ್ಡ ಸಾರಿಗೆ ವ್ಯವಸ್ಥೆ ಹೊಂದಿರುವ ರೈಲ್ವೆ ಇಲಾಖೆ, ಅತ್ಯಾಧುನಿಕ ಸೌಲಭ್ಯ, ತಂತ್ರಜ್ಞಾನ ಹೊಂದಿದ್ದರೂ ರೈಲು ಅಪಘಾತದಿಂದ ಪ್ರತಿವರ್ಷ ಸಂಭವಿಸುವ ಸಾವು– ನೋವಿನ ಪ್ರಮಾಣ ಮಾತ್ರ ಕಡಿಮೆ ಆಗುತ್ತಿಲ್ಲ.

ನೈರುತ್ಯ ರೈಲ್ವೆ ವಿಭಾಗದ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರೈಲ್ವೆ ಹಳಿಗೆ ಸಿಲುಕಿ 360ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಮೂರು ವರ್ಷಗಳಲ್ಲೇ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಪ್ರತಿ ವರ್ಷವೂ ಅಂದಾಜು 120ಕ್ಕೂ ಅಧಿಕ ಜನರ ಸಾವು ಸಂಭವಿಸುತ್ತಿವೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಇಂತಹ ಘಟನೆಗಳು ಹೆಚ್ಚುತ್ತಿರುವುದು ರೈಲ್ವೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ರೈಲು ಹಳಿಗಳಿಗೆ ಸಿಲುಕಿ ಸಾವನ್ನಪ್ಪುವವರಲ್ಲಿ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು. ಉಳಿದಂತೆ ಚಲಿಸುತ್ತಿರುವ ರೈಲಿಗೆ ಬೇಜವಾಬ್ದಾರಿಯಿಂದ ಸಿಲುಕಿ, ರೈಲಿನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆಗಳೂ ಹೆಚ್ಚುತ್ತಿವೆ.

ADVERTISEMENT

ರೈಲ್ವೆ ಹಳಿ ಮೇಲೆ ಆತ್ಮಹತ್ಯೆ: 

‘ರೈಲಿಗೆ ಸಿಲುಕಿ ಮೃತಪಟ್ಟವರ ಪ್ರಕರಣಗಳಲ್ಲಿ ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ಜೀವನದಲ್ಲಿ ಜುಗುಪ್ಸೆ, ಸಾಲದಂತಹ ಕಾರಣಗಳೇ ಹೆಚ್ಚು ಕೇಳಿಬಂದಿವೆ. ಇನ್ನುಳಿದಂತೆ ರೈಲ್ವೆ ಹಳಿಯಲ್ಲಿ ಮಲಗಿದಾಗ, ಕ್ರಾಸಿಂಗ್ ಇದ್ದರೂ ಹಳಿ ದಾಟುವಾಗ, ಇಯರ್‌ ಫೋನ್ ಹಾಕಿಕೊಂಡು ಹಳಿಯಲ್ಲಿ ನಡೆದುಕೊಂಡು ಹೋಗುವಾಗ, ರೈಲು ಬರುತ್ತಿರುವಾಗ ಹಳಿಯಲ್ಲಿ ನಿಂತು ಫೋಟೊ ತೆಗೆದುಕೊಳ್ಳುವುದು, ವಿಡಿಯೊ ಚಿತ್ರೀಕರಿಸುವುದು ಮಾಡುವಾಗ ರೈಲು ಹಾಯ್ದು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಸಾವಿನಿಂದ ಪಾರಾದರೂ, ತೀವ್ರ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ’ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.

ಅಸಹಜ ಸಾವು ಪ್ರಕರಣ: 

‘ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಎಂಟು ಆಕಸ್ಮಿಕ ಹಾಗೂ ನಾಲ್ಕು ಅಸಹಜ ಸಾವುಗಳು ಸಂಭವಿಸಿವೆ. ಅದರಲ್ಲಿ ನಿರ್ಗತಿಕರು, ಭಿಕ್ಷುಕರು, ವಯೋವೃದ್ಧರೇ ಹೆಚ್ಚು. ಚಳಿಗಾಲದ ಸಂದರ್ಭದಲ್ಲಿ ಅಸಹಜ ಸಾವಿನ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತವೆ. ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲಿನಲ್ಲಿ ಪ್ರಯಾಣಿಸುವ ವೇಳೆ ಹೃದಯಾಘಾತ, ಇತರ ಅನಾರೋಗ್ಯ ಸಮಸ್ಯೆಯಿಂದ ಕಳೆದ ಮೂರು ವರ್ಷಗಳಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದವರು ಮೃತಪಟ್ಟರೇ, ಅವರ ಕುಟುಂಬಗಳಿಗೆ ರೈಲ್ವೆ ಇಲಾಖೆಯಿಂದ ಪರಿಹಾರ ಒದಗಿಸಲಾಗುತ್ತದೆ’ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ರೈಲು ಬರುತ್ತಿರುವ ವೇಳೆಯೇ ಜನರು ರೈಲು ಹಳಿ ದಾಟಿದರು
ರೈಲ್ವೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಪೊಲೀಸರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಪ್ರಯಾಣಿಕರು ಜಾಗೃತಿವಹಿಸಬೇಕು. ನಿಯಮ ಉಲ್ಲಂಘಿಸುವವರಿಗೆ ತಿಳಿಹೇಳಬೇಕು
ರೈಲ್ವೆ ಪೊಲೀಸ್ ಅಧಿಕಾರಿ ಹುಬ್ಬಳ್ಳಿ ವಿಭಾಗ
ರೈಲು ಹಳಿಯಲ್ಲಿ ಓಡಾಡದಂತೆ ರೈಲ್ವೆ ಇಲಾಖೆಯಿಂದ ವರ್ಷವಿಡೀ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತದೆ. ಆದರೂ ನಿಯಮಗಳನ್ನು ಉಲ್ಲಂಘಿಸಿ ರೈಲು ಹಾಯ್ದು ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ
ಮಂಜುನಾಥ ಕನಮಡಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ಶವದ ಗುರುತು ಪತ್ತೆ ಹಚ್ಚುವುದೇ ಕಷ್ಟ
‘ರೈಲ್ವೆ ಹಳಿಗೆ ಸಿಲುಕಿ ಮೃತಪಟ್ಟವರ ದೇಹ ಛಿದ್ರವಾಗಿರುತ್ತದೆ. ಕೆಲವರ ಗುರುತು ಕೂಡ ಸಿಗುವುದಿಲ್ಲ. ಮೃತರ ಗುರುತು ಪತ್ತೆ ಹಚ್ಚುವುದೇ ಬಹುದೊಡ್ಡ ಸವಾಲಾಗುತ್ತದೆ. ಮುಖ ದೇಹದ ಮೇಲಿನ ಗುರುತು ಮೊಬೈಲ್ ಬ್ಯಾಗ್‌ನಲ್ಲಿ ಸಿಕ್ಕ ವಸ್ತುಗಳನ್ನು ನೋಡಿ ಗುರುತು ಪತ್ತೆ ಹಚ್ಚಿ ಕುಟುಂಬಸ್ಥರನ್ನು ಸಂಪರ್ಕಿಸಿ ಶವ ಹಸ್ತಾಂತರಿಸಲಾಗುತ್ತದೆ. ಗುರುತು ಸಿಗದ ಶವಗಳನ್ನು ಕೆಲವು ದಿನ ಇಟ್ಟುಕೊಂಡು ಕೊನೆಗೆ ವಾರಸುದಾರರು ಸಿಗದಿದ್ದಾಗ ರೈಲ್ವೆ ಇಲಾಖೆಯಿಂದಲೇ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ’ ಎನ್ನುತ್ತಾರೆ ರೈಲ್ವೆ ಪೊಲೀಸರು.
‘ರೈಲ್ವೆ ಇಲಾಖೆಯಿಂದ ಸುರಕ್ಷತೆಗೆ ಆದ್ಯತೆ’
‘ರೈಲು ಹಳಿಗೆ ಸಿಲುಕಿ ಸಂಭವಿಸುವ ಸಾವು–ನೋವುಗಳಿಗಳಿಗೆ ಪ್ರಯಾಣಿಕರ ನಿರ್ಲಕ್ಷ್ಯವೇ ಕಾರಣವಾಗಿದೆ. ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆ ಹೆಚ್ಚಿನ ಆದ್ಯತೆ ನೀಡಿದೆ. ಸುರಕ್ಷತೆಯ ಕುರಿತು ಜಾಗೃತಿಯನ್ನೂ ಮೂಡಿಸಲಾಗುತ್ತದೆ. ಪ್ರಯಾಣಿಕರು ಒಂದು ಫ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಫ್ಲಾಟ್‌ಫಾರ್ಮ್‌ಗೆ ಹೋಗಲು ರೈಲಿನಿಂದ ಇಳಿದು ಹೊರಹೋಗಲು ಅಂಡರ್‌ಪಾಸ್‌ ಸ್ಕೈವಾಕ್ ಎಸ್ಕ್‌ಲೇಟರ್ ವ್ಯವಸ್ಥೆ ಕಲ್ಪಿಸಿದೆ. ಆದರೂ ಕೆಲವರು ನಿಯಮ ಮೀರಿ ರೈಲು ಹಳಿಯಲ್ಲಿಯೇ ಸಾಗುತ್ತಾರೆ. ಈ ವೇಳೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.
ಮುನ್ನೆಚ್ಚರಿಕೆ ಕ್ರಮಗಳು
ರೈಲು ಸಂಚರಿಸುವಾಗ ಹಳಿಯ ಪಕ್ಕ ನಿಲ್ಲಬಾರದು ಕಿವಿಯಲ್ಲಿ ಇಯರ್ ಫೋನ್ ಹಾಕಿಕೊಂಡು ಹಳಿಯಲ್ಲಿ ಸಂಚರಿಸಬಾರದು ರೈಲು ಹಳಿಯಲ್ಲಿ ನಿಂತುಕೊಂಡು ಮೊಬೈಲ್‌ನಲ್ಲಿ ಮಾತನಾಡಬಾರದು ರೈಲು ಬರುವಾಗ ಹಳಿಯಲ್ಲಿ ನಿಂತು ಫೋಟೊ ತೆಗೆದುಕೊಳ್ಳುವುದು ಬೇಡ ಕ್ರಾಸಿಂಗ್ ಸಮಯದಲ್ಲಿ ರೈಲ್ವೆ ಹಳಿ ದಾಟಬಾರದು ರೈಲು ಹಳಿಯಲ್ಲಿ ಕುಳಿತುಕೊಳ್ಳುವುದು ಮಲಗುವುದು ಮಾಡಬಾರದು ರೈಲು ನಿಲ್ದಾಣದಲ್ಲಿ ಫ್ಲಾಟ್‌ಫಾರ್ಮ್‌ಗೆ ತೆರಳಲು ಹಳಿ ದಾಟಿ ಹೋಗದೆ ಕೆಳಸೇತುವೆ ಫ್ಲೈಓವರ್ ಬಳಸಬೇಕು ಚಲಿಸುವಾಗ ರೈಲು ಹತ್ತುವುದು ನಿಲ್ಲುವ ಮುನ್ನವೇ ಇಳಿಯುವುದು ಮಾಡಬಾರದು ಚಲಿಸುವ ರೈಲಿನ ಬಾಗಿಲಿನಲ್ಲಿ ನಿಲ್ಲಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.