ಹುಬ್ಬಳ್ಳಿ: ‘ನಗರದ ಈದ್ಗಾ ಮೈದಾನದಲ್ಲಿ ಈ ವರ್ಷ ಗಣೇಶಮೂರ್ತಿ ಪ್ರತಿಷ್ಠಾಪಿಸುವುದು ನಿಶ್ಚಿತ. ಅದಕ್ಕೆ ಅನುಮತಿ ನಿರಾಕರಿಸಿದರೆ ಸಾವಿರಾರು ಮಂದಿ ಮೈದಾನಕ್ಕೆ ನುಗ್ಗಿ ಮೂರ್ತಿ ಪ್ರತಿಷ್ಠಾಪಿಸುತ್ತೇವೆ. ಲಾಠಿ ಚಾರ್ಜ್ ಮಾಡಲಿ, ಗುಂಡು ಹೊಡೆಯಲಿ ಅಥವಾ ನಿಷೇಧಾಜ್ಞೆಯೇ ವಿಧಿಸಲಿ. ಅವೆಲ್ಲವನ್ನು ಉಲ್ಲಂಘಿಸುತ್ತೇವೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು.
ಪಾಲಿಕೆ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಣೇಶಮೂರ್ತಿ ಪ್ರತಿಷ್ಠಾಪನೆ ನಮ್ಮ ಹಕ್ಕು. ಅದಕ್ಕೆ ಅಡ್ಡಿಪಡಿಸಲು ನೀವ್ಯಾರು? ಅಡ್ಡಿಪಡಿಸಿದ್ದೇ ಆದರೆ, ನಾವು ಸಹ ಅವರು ಪ್ರಾರ್ಥನೆ ಮಾಡುವಾಗ ಅಡ್ಡಿಪಡಿಸುತ್ತೇವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜನಪ್ರತಿನಿಧಿ ವಿರುದ್ಧ ಮತ ಚಲಾಯಿಸುವಂತೆ ಮನೆ–ಮನೆಗೆ ಗಣೇಶಮೂರ್ತಿ ಹಿಡಿದು ಅಭಿಯಾನ ನಡೆಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಅನುಮತಿ ನೀಡಲು ಪಾಲಿಕೆ ಹಾಗೂ ಸರ್ಕಾರ ಮೀನಮೇಷ ಎಣಿಸುತ್ತಿವೆ. ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿ ನಿರ್ಣಯ ಕೈಗೊಳ್ಳಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಮಿತಿ ರಚನೆ ಮಾಡಿದ್ದು ಕಾಲಹರಣ ಮಾಡಲು. ಅನುಮತಿ ನೀಡುವ ಅಧಿಕಾರ ಆಯುಕ್ತರಿಗೆ ಇದ್ದಾಗ, ಸಮಿತಿ ರಚಿಸುವ ಅಗತ್ಯವಿರಲಿಲ್ಲ. ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ. ಅದಕ್ಕಾಗಿ ಯಾವುದೇ ಕಾರಣಕ್ಕೂ ನಕಾರಾತ್ಮಕ ವರದಿ ನೀಡಬಾರದು. ವ್ಯತಿರಿಕ್ತ ವರದಿ ನೀಡಿದರೆ ಬಲವಂತವಾಗಿ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.