ಹುಬ್ಬಳ್ಳಿ: ‘ಹಿಂದೂ, ಮುಸ್ಲಿಂ ಸೇರಿದಂತೆ ಯಾವ ಧರ್ಮದವರೂ ಕಾನೂನನ್ನುಕೈಗೆತ್ತಿಕೊಳ್ಳಬಾರದು. ಈ ಬಗ್ಗೆ ಎಲ್ಲಾ ಸಮುದಾಯದವರೂ ಯೋಚಿಸಬೇಕು. ಅದೇ ರೀತಿ, ಕಾಂಗ್ರೆಸ್ನವರು ಸಹ ಮುಸ್ಲಿಮರ ಓಲೈಕೆಯನ್ನು ನಿಲ್ಲಿಸಬೇಕು‘ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧಾರವಾಡದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿಗೆ ಸೇರಿದ ಕಲ್ಲಂಗಡಿ ಅಂಗಡಿಯನ್ನು ಧ್ವಂಸಗೊಳಿಸಿದ್ದರ ಕುರಿತು ಮಾತನಾಡುವ ಕಾಂಗ್ರೆಸ್ನವರು, ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಬಗ್ಗೆ ಯಾಕೆ ದನಿ ಎತ್ತಲಿಲ್ಲ. ಯಾಕೆ ಆತನ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟೀಕಿಸದಿದ್ದರೆ ತಿಂದ ಆಹಾರ ಜೀರ್ಣವಾಗುವುದಿಲ್ಲ. ಹಾಗಾಗಿ, ಎಲ್ಲಾ ಘಟನೆ ಮತ್ತು ವಿವಾದಗಳಿಗೆ ಸಂಘವನ್ನು ತಳುಕು ಹಾಕಿ ವಿರೋಧಿಸುತ್ತಾರೆ. ವಿರೋಧ ಪಕ್ಷವಾಗಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಂಘದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.