ನವಲಗುಂದ: ‘ಕಳಸಾ ಬಂಡೂರಿ ನಾಲಾ ಜೋಡಣೆ ವಿಚಾರಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಮ್ಮ ರಾಜಕೀಯ ನಾಟಕವನ್ನು ಬಿಟ್ಟು ಕೇಂದ್ರ ಹಾಗೂ ರಾಜ್ಯ ಒಟ್ಟಿಗೆ ಸೇರಿ ಕಾನೂನು ತೊಡಕು ಸರಿಪಡಿಸಿ ಶೀಘ್ರದಲ್ಲಿಯೇ ಕಾಮಗಾರಿಗೆ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ರೈತರು ಉಗ್ರವಾದ ಹೋರಾಟ ಮಾಡಿ ನಮ್ಮ ನೀರಿನ ಹಕ್ಕನ್ನು ನಾವು ಪಡೆದು ಕೊಳ್ಳಬೇಕಾಗುತ್ತದೆ’ ಎಂದು ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ಆಗ್ರಹಿಸಿದರು.
ಈ ಕುರಿತು ಗುರುವಾರ ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿಯಿಂದ ಉಪ ತಹಶೀಲ್ದಾರ್ ಗಣೇಶ ಚಳ್ಳಿಕೇರಿ ಮೂಲಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಚೆಲುವರಾಯಸ್ವಾಮಿ ಹಾಗೂ ಶಾಸಕ ಎನ್.ಎಚ್.ಕೋನರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಮುಖಂಡ ಸುಭಾಸಗೌಡ ಪಾಟೀಲ ಮಾತನಾಡಿ, ‘ಮಹದಾಯಿ ಕಳಸಾ ಬಂಡೂರಿ ಕಾಮಗಾರಿ ಶೀಘ್ರ ಆರಂಭಿಸಬೇಕು. ಇಲ್ಲದಿದ್ದರೆ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ. ಹೋರಾಟದಲ್ಲಿ ಏನಾದರೂ ಅವಘಡ ಸಂಭವಿಸಿದರೆ ನೀವೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.
‘ಬೆಳೆ ವಿಮೆ, ಬೆಳೆ ಪರಿಹಾರ, ಬಾಕಿ ವಿಮಾ ಹಣ ಶೀಘ್ರ ರೈತರ ಖಾತೆಗೆ ಜಮಾ ಮಾಡಬೇಕು’ ಎಂದು ಆಗ್ರಹಿಸಿದರು.
ರೈತ ಮಲ್ಲೇಶ ಉಪ್ಪಾರ ಮಾತನಾಡಿ, ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ರೈತರಿಗೆ ಬೀಜ ಗೊಬ್ಬರ ಕೊರತೆಯಾಗದಂತೆ ಸಮರ್ಪಕವಾಗಿ ಪೂರೈಸಿ, ಅಲ್ಲದೇ ರೈತರು ಬ್ಯಾಂಕಿನಲ್ಲಿ ಬೆಳೆಸಾಲ ತೆಗೆದುಕೊಂಡು ಕಟಬಾಕಿಯಾದರೂ ಸಿಬಿಐಲ್, ತೆಗೆದು ಹಾಕಿ ಸಾಲ ಕೊಡಬೇಕು ಅಂತಾ ಆದೇಶವಿದ್ದರೂ ಕೂಡ ಬ್ಯಾಂಕಿನಲ್ಲಿ ರೈತರಿಗೆ ಯೋಜನೆ ದೊರಕುತ್ತಿಲ್ಲ. ಆದೇಶವನ್ನು ಎಲ್ಲ ಬ್ಯಾಂಕ್ ಮ್ಯಾನೇಜರ್ಗಳಿಗೆ ಪಾಲನೆ ಮಾಡಲು ಸೂಚನೆ ನೀಡಬೇಕು ಎಂದರು.
ಅಧ್ಯಕ್ಷ ಯಲ್ಲಪ್ಪ ದಾಡಿಬಾಯಿ, ಬಸನಗೌಡ ಹುನಸಿಕಟ್ಟೆ, ಸಿದ್ಧಲಿಂಗಪ್ಪ ಹಳ್ಳದ, ಸಂಗಪ್ಪ ನೀಡವಣಿ, ಶಿವಪ್ಪ ಸಂಗಳದ, ನಿಂಗಪ್ಪ ತೋಟದ, ಮಲ್ಲಪ್ಪ ಬಸಗೋನ್ನವರ, ಕರಿಯಪ್ಪ ತಳವಾರ, ಗಂಗಪ್ಪ ಸಂಗಟಿ, ಚಾ ಹುಸೇನ್, ಗುರುನಾಥ ಕುಲಕರ್ಣಿ, ಮುರುಗೆಪ್ಪ ಪಲ್ಲೇದ, ಗೋವಿಂದರೆಡ್ಡಿ ಮೊರಬ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.