ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 13 ರಿಂದ 16 ರವರೆಗೆ ಕೃಷಿ ಮೇಳ ನಡೆಯಲಿದೆ. ‘ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು’ ಘೋಷ ವಾಕ್ಯದಡಿ ಮೇಳ ನಡೆಯಲಿದೆ ಎಂದು ಕೃಷಿ ವಿ.ವಿ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕ್ಯೂಆರ್’ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 20 ಸಾವಿರ ಮಂದಿ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ, ಕೃಷಿ ನವೋದ್ಯಮಗಳು, ಕಿಸಾನ್ ಡ್ರೋನ್ ಬಳಕೆ, ಜಾನುವಾರುಗಳ ಪ್ರದರ್ಶನ ಮೊದಲಾದವು ಮೇಳದ ಪ್ರಮುಖ ಆಕರ್ಷಣೆಗಳು’ ಎಂದು ತಿಳಿಸಿದರು.
500ಕ್ಕೂ ಹೆಚ್ಚು ಮಳಿಗೆಗಳು: ‘ಮೇಳದಲ್ಲಿ 550ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. 162 ಹೈಟೆಕ್ ಮಳಿಗೆ, 99 ಯಂತ್ರೋಪಕರಣ ಮಳಿಗೆ, 50 ಜಾನುವಾರು ಪ್ರದರ್ಶನ ಮಳಿಗೆ, 29 ಆಹಾರ ಮಳಿಗೆ, 272 ಸಾಮಾನ್ಯ ಮಳಿಗೆಗಳು ಬುಕ್ಕಿಂಗ್ ಆಗಿವೆ’ ಎಂದರು.
‘ಕೃಷಿ ಪರಿಕರ, ನರ್ಸರಿ ಪ್ರಕಟಣೆ, ಭಾರಿ ಯಂತ್ರೋಪಕರಣ, ಬೀಜ ಘಟಕ, ಇತರ ಮಳಿಗೆಗಳು ಇರಲಿವೆ. ಮೇಳ ನಡೆಯುವ ಎಲ್ಲ ಕಡೆ ಜರ್ಮನ್ ಟೆಂಟ್ ಅಳವಡಿಸಲಾಗುವುದು’ ಎಂದು ತಿಳಿಸಿದರು.
ಬಿತ್ತನೆ ಬೀಜ, ಜೈವಿಕ ಗೊಬ್ಬರ ಲಭ್ಯ: ‘ಬೀಜ ಘಟಕದಲ್ಲಿ ಹಿಂಗಾರು ಹಂಗಾಮಿಗೆ ಹಿಂಗಾರಿ ಜೋಳ 219, ಗೋಧಿ 581, ಕಡಲೆ, 2,548, ಕುಸುಬೆ 81, ಉದ್ದು 45, ಅಲಸಂದಿ 29, ಶೇಂಗಾ 11, ಊದಲು 2 ಕ್ವಿಂಟಲ್ ಒಟ್ಟು 3516.91 ಕ್ವಿಂಟಲ್ ಬಿತ್ತನೆ ಬೀಜಗಳು ಮೇಳದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಜೈವಿಕ ಗೊಬ್ಬರದ ದ್ರವ 835 ಲೀಟರ್, ಜೈವಿಕ ಗೊಬ್ಬರ ಪುಡಿ 17, ಜೈವಿಕ ಪೀಡೆನಾಶಕ 21 ಕ್ವಿಂಟಲ್ ಮಾರಾಟಕ್ಕೆ ಲಭ್ಯವಿರುತ್ತದೆ’ ಎಂದರು.
ನವೋದ್ಯಮ(ಸ್ಟಾರ್ಟ್ಅಪ್) ಪೆವಿಲಿಯನ್: ಮೇಳದಲ್ಲಿ ನವೋದ್ಯಮ ಪೆವಿಲಿಯನ್ ಪ್ರತ್ಯೇಕವಾಗಿ ಸ್ಥಾಪಿಸಲಾಗುವುದು. ನವೋದ್ಯಮಗಳ ನವೀನ ಉತ್ಪನ್ನಗಳು, ಸೇವೆಗಳ ಪ್ರದರ್ಶನ ಮತ್ತು ರೈತರಿಗೆ ತಿಳಿವಳಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕೃಷಿಕ್-ನವೋದ್ಯಮ ಪೋಷಣ ಕೇಂದ್ರವು 10 ತಂಡಗಳಿಗೆ ತರಬೇತಿ ನೀಡಿದೆ. 111 ಸ್ಟಾರ್ಟ್ ಅಪ್ ಆರಂಭಿಸಿ ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿ 957 ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. 25 ಮಹಿಳಾ ನೇತೃತ್ವದ ಸ್ಟಾರ್ಟ್ ಅಪ್ಗಳು 11 ಪೇಟೆಂಟ್ ಪಡೆದುಕೊಂಡಿವೆ. ವಿಶ್ವವಿದ್ಯಾಲಯವು ಕಳೆದ ವರ್ಷ 10 ಹೊಸ ತಳಿಗಳು ಮತ್ತು 20 ಕೃಷಿ ತಾಂತ್ರಿಕತೆಗಳನ್ನು ಬಿಡುಗಡೆ ಮಾಡಿದೆ. ಎಂದರು.
‘ಕೃಷಿ ವಿ.ವಿ ಯಿಂದ ಬಾಹ್ಯಾಕಾಶಕ್ಕೆ ಸಂಶೋಧನಾ ಪ್ರಯೋಗಕ್ಕಾಗಿ ‘ಆಕ್ಸಿಯೋಮ್-4 ಮಿಷನ್’ನಲ್ಲಿ ಕಳುಹಿಸಿದ ಹೆಸರು ಮತ್ತು ಮೆಂತೆಕಾಳು ಮೊಳಕೆ ಪರೀಕ್ಷೆ ಯಶಸ್ವಿಯಾಗಿದೆ. ಈ ಮೊಳಕೆ ಕಾಳುಗಳು ಅಮೆರಿಕಕ್ಕೆ ಬಂದಿವೆ. ಕಾಳುಗಳು ಭಾರತಕ್ಕೆ ತಲುಪಿದ ನಂತರ ವಿವಿಧ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಲಾಗುವುದು’ ಎಂದು ತಿಳಿಸಿದರು.
ಕೃಷಿ ಮೇಳದ ಅಧ್ಯಕ್ಷ ಮಂಜನಾಥ ಎಂ.ವಿ, ಉಪಾಧ್ಯಕ್ಷ ಬಿ.ಡಿ.ಬಿರಾದಾರ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಪಾರ್ವತಿ ಕುರ್ಲೆ, ಬಸವರಾಜ ಕುಂದಗೋಳಮಠ, ವೀರನಗೌಡ ಪೊಲೀಸ್ಗೌಡ, ಶ್ರೀನಿವಾಸ ಕೋಟ್ಯಾನ್, ರವಿಕುಮಾರ್ ಮಾಳಿಗೇರ ಸುದ್ದಿಗೋಷ್ಠಿಯಲ್ಲಿದ್ದರು.
15ರಂದು ಸಿ.ಎಂ ಉದ್ಘಾಟನೆ:
ಸೆ. 13ರಂದು ಬೆಳಿಗ್ಗೆ 11ಕ್ಕೆ ‘ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ’ ಹಾಗೂ ಮಧ್ಯಾಹ್ನ 12.30 ಕ್ಕೆ ‘ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಪೌಷ್ಠಿಕ ಆಹಾರ ಭದ್ರತೆ’ ನಡೆಯಲಿದೆ. ಮಧ್ಯಾಹ್ನ 4.30ಕ್ಕೆ ಕೃಷಿ ಗೋಷ್ಠಿ ಚನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ. 14ರಂದು ಬೆಳಿಗ್ಗೆ 10.30ಕ್ಕೆ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನ ಉದ್ಘಾಟನೆ ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು 11 ಗಂಟೆಗೆ ಬೀಜ ಮೇಳ ಉದ್ಘಾಟಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ರಂದು ಬೆಳಿಗ್ಗೆ 11.30ಕ್ಕೆ ಕೃಷಿ ಮೇಳದ ಉದ್ಘಾಟನೆ ನೇರವೇರಿಸುವರು. ಪ್ರಶಸ್ತಿ ಪ್ರದಾನ ಮಾಡುವರು. 16ರಂದು ಬೆಳಿಗ್ಗೆ 11 ಕ್ಕೆ ‘ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗ- ಅವಕಾಶಗಳು ಹಾಗೂ ಸವಾಲುಗಳು’ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ವಿಶೇಷ ತರಬೇತಿ ಕಾರ್ಯಕ್ರಮಗಳು: 13ರಂದು ಎಕರೆಗೆ 100 ಟನ್ ಕಬ್ಬು ಇಳುವರಿಗೆ ವಿಶೇಷ ತಾಂತ್ರಿಕತೆಗಳು 14ರಂದು ಅಧಿಕ ಇಳುವರಿಗಾಗಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ 15ರಂದು ಜಾನುವಾರು ನಿರ್ವಹಣೆಯಲ್ಲಿ ನವೀನ ತಂತ್ರಜ್ಞಾನಗಳು ಹಾಗೂ 16 ಹೈ-ಟೆಕ್ ತೋಟಗಾರಿಕೆ ತಂತ್ರಜ್ಞಾನಗಳು ವಿಶೇಷ ತರಬೇತಿ ಕಾರ್ಯಕ್ರಮಗಳು ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.