
ಕುಂದಗೋಳ: ಅನ್ನ, ಅರಿವು, ಆಶ್ರಯ ನಿಡಿ ಬಡ ಮಕ್ಕಳ ಕಲ್ಯಾಣ ಮಾಡುತ್ತ ಬೆಳೆಯುತ್ತಿರುವ ಕುಂದಗೋಳ ಶಿವಾನಂದ ಮಠಕ್ಕೆ ದಾನವಾಗಿ ಬಂದ ಜಮೀನನ್ನು ಪಟ್ಟಭದ್ರರು ಕಬಳಿಸಿ ಸಿದ್ದೇಶ್ವರ ಶ್ರೀಗಳ ಪೋಟೋ ಹಾಕಿ ನಿವೇಶನ ಮಾಡಿ ಅನ್ಯಾಯ ಮಾಡುತ್ತಿದ್ದಾರೆ. ಭೂಗಳ್ಳರಿಗೆ ಹಾಗೂ ಅಲ್ಲಿ ಜಾಗ ಖರೀದಿ ಮಾಡುವವರಿಗೆ ನೆಮ್ಮದಿ ಇರುವುದಿಲ್ಲ ಎಂದು ಘೋಢಗೇರಿಯ ಮಲ್ಲಯ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಾನಂದ ಮಠದ ಜೆ.ಎಸ್.ಎಸ್. ವಿದ್ಯಾಪೀಠದ ಆವರಣದಲ್ಲಿ ಗುರುವಾರ ನಡೆದ ಲಿಂ. ಬಸವೇಶ್ವರ ಮಹಾಸ್ವಾಮೀಜಿ 47ನೇ ಪುಣ್ಯಾರಾಧನೆ, ಲಿಂ.ಬಸವರಾಜ ಸ್ವಾಮೀಜಿಗಳ 17ನೇ ಹಾಗೂ ಲಿಂ. ಶಾಂತಯೋಗಿ ಬಸವೇಶ್ವರರ 7ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘1963ರಿಂದ ಶ್ರೀಮಠ ಬಡವರ ಕಲ್ಯಾಣ ಮಾಡುತ್ತಿದ್ದು, ಇದಕ್ಕಾಗಿ ಎಲ್ಲ ಶ್ರೀಗಳು ಶ್ರಮಿಸಿದ್ದಾರೆ. ಈಗ ಬಡಮಕ್ಕಳ ಶಿಕ್ಷಣಕ್ಕಾಗಿ ಬಂದ ದಾನದ ಜಮೀನು ಕಬಳಿಸಿದ್ದಾರೆ. ಅಲ್ಲಿ ಜಾಗ ಖರೀದಿಸುವುದು ಪಾಪ ತಟ್ಟುತ್ತದೆ. ಜನರು ಧರ್ಮದಿಂದರಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜ, ಮುಳ್ಳಹಳ್ಳಿಯ ಶಿವಯೋಗಿ ಮಹಾಸ್ವಾಮೀಜಿ, ಮುಖಂಡ ಅರವಿಂದಪ್ಪ ಕಟಗಿ, ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಂಕರಗೌಡ ದೊಡ್ಡಮನಿ, ರಮೇಶ ಕೊಪ್ಪದ, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಯಲ್ಲಪ್ಪ ಮೇಗುಂಡಿ ಇದ್ದರು.
ಸಂಜೆ ನಡೆದ ವಿದ್ಯಾಪೀಠದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಿ.ಎಸ್.ಐ. ಶರಣಬಸಪ್ಪ ಸಂಗಳದ, ಶಿವಾನಂದ ಮಠದ ಮಹಾಂತ ಸ್ವಾಮೀಜಿ ಹಾಗೂ ವಕೀಲ ಶಂಕರ ತೊಂಡೂರ ಪಾಲ್ಗೊಂಡಿದ್ದರು. ಮಕ್ಕಳಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.