ಹುಬ್ಬಳ್ಳಿ: ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಬಳಿಕವೂ ಮೊದಲಿನ ರೀತಿಯಲ್ಲಿಯೇ ಸರಳತೆ ಹಾಗೂ ವಿನಯವಂತಿಕೆ ಉಳಿಸಿಕೊಂಡಿರುವ ನೀರಜ್ ಚೋಪ್ರಾ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಲಿ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ ತರಬೇತುದಾರ ಕಾಶೀನಾಥ ನಾಯ್ಕ ಹೇಳಿದರು.
ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ನಗರದ ಚೈತನ್ಯ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ‘ಕ್ರೀಡಾಪಟುಗಳಿಗೆ ಪ್ರತಿಭೆ ಇದ್ದರಷ್ಟೇ ಸಾಲದು. ಎಲ್ಲರೊಂದಿಗೆ ಬೆರೆಯುವ, ಎಲ್ಲರನ್ನೂ ಗೌರವಿಸುವ ಮನೋಭಾವನೆ ಇರಬೇಕು. ಇದರಿಂದ ಸಾಧಕನ ಘನತೆ ದುಪ್ಪಟ್ಟಾಗುತ್ತದೆ. ಕ್ರೀಡಾ ಬದ್ಧತೆ, ಕಠಿಣ ಪರಿಶ್ರಮದ ಜೊತೆ ಸುಂದರ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು’ ಎಂದರು.
‘ಜಾವೆಲಿನ್ ಎಸೆತ ಅರಂಭಿಸಿದ ದಿನಗಳಲ್ಲಿ ನೀರಜ್ ಹೇಗಿದ್ದನೊ, ಈಗಲೂ ಹಾಗೆಯೇ ಇದ್ದಾನೆ. ಇದರಿಂದಾಗಿ ನೀರಜ್ ಗೆಲ್ಲಬೇಕು ಎಂದು ದೇಶದ ಕೋಟ್ಯಂತರ ಜನ ಹಾರೈಸಿದರು. ಅವರ ಸಾಧನೆ ಸಾಕಷ್ಟು ಯುವ ಅಥ್ಲೀಟ್ಗಳಲ್ಲಿ ದೊಡ್ಡ ಸಾಧನೆಯ ಆಶಾಭಾವ ಮೂಡಿಸಿದೆ’ ಎಂದರು.
ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಕೆ. ಎಸ್. ಭೀಮಣ್ಣನವರ ಮಾತನಾಡಿ ‘ನಮ್ಮ ಮುಂದೆ ಓದು ಹಾಗೂ ಕ್ರೀಡಾ ಕೌಶಲ ಕಲಿತ ಅನೇಕರು ಈಗ ದೊಡ್ಡ ಸಾಧನೆ ಮಾಡಿದ್ದಾರೆ. ನೀವೂ ಅವರಂತೆ ಆಗಬೇಕು. ದೊಡ್ಡ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮ ಪಡಬೇಕು’ ಎಂದರು.
ಸೆಪಕ್ಟಕ್ರಾ ಕೋಚ್ ಪಿ. ಮಂಜುನಾಥ, 2019ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪಡೆದ ಭಾರತ ಅಟ್ಯಾ ಪಟ್ಯಾ ತಂಡದ ಆಟಗಾರ್ತಿ ಹುಬ್ಬಳ್ಳಿಯ ಅನಿತಾ ಬಿಚಗತ್ತಿ, ಅಥ್ಲೀಟ್ ನಾಗರಾಜ ಕುಡಬಾವಿ, ವಾಲಿಬಾಲ್ ಆಟಗಾರ ಅಮನ್ ಕುಸುಗಲ್ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಮುಖ್ಯಸ್ಥ ವಿಲಾಸ ನೀಲಗುಂದ, ಕ್ರಿಕೆಟ್ ಕೋಚ್ ನಿತಿನ್ ಭಿಲ್ಲೆ, ಮಾಸ್ಟರ್ ಅಥ್ಲೀಟ್ ನಂದಾ ಕಲ್ಲೂರ ಹಾಗೂ ಸಿ.ಬಿ. ಕಲ್ಲೂರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.