ಹುಬ್ಬಳ್ಳಿ: ‘ಆರು ಬಾರಿ ಶಾಸಕರಾಗಿರುವ ಜಗದೀಶ ಶೆಟ್ಟರ್ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹು–ಧಾ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಯುವಕರಿಗೆ ಅನುಕೂಲ ಮಾಡಿಕೊಟ್ಟು, ಹಿರಿಯಣ್ಣನಂತೆ ಸೂಕ್ತ ಮಾರ್ಗದರ್ಶನ ಮಾಡಬೇಕು’ ಎಂದು ಎಸ್ಎಸ್ಕೆ ಸಮಾಜದ ಮುಖಂಡ, ಬಿಜೆಪಿ ಟಿಕೆಟ್ ಆಕಾಂಕ್ಷಿ ಹನುಮಂತ ನಿರಂಜನ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ಹಿರಿಯ ಮುಖಂಡರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೈ ಕಮಾಂಡ್ ಹೇಳಿದೆ. ಗುಜರಾತ್ ಮಾದರಿಯಲ್ಲಿಯೇ ರಾಜ್ಯದಲ್ಲೂ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ನಾಲ್ಕಕ್ಕಿಂತ ಹೆಚ್ಚು ಬಾರಿ ಆಯ್ಕೆಯಾದವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸುವ ಸಾಧ್ಯತೆಯಿದೆ. ಅಧಿಕಾರ ಒಬ್ಬರ ಕೈಯ್ಯಲ್ಲಿ ಇದ್ದರೆ, ಹಣ ಮತ್ತು ತೋಳ್ಬಲದ ಪ್ರಾಬಲ್ಯ ಹೆಚ್ಚಾಗಿ ಜನಸಾಮಾನ್ಯನ ಬದುಕು ಕಷ್ಟವಾಗುತ್ತದೆ’ ಎಂದರು.
‘ಹು–ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಎಸ್ಎಸ್ಕೆ ಹಾಗೂ ಕ್ಷತ್ರೀಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 25 ವರ್ಷಗಳಿಂದ ನಮ್ಮ ಸಮಾಜದ ಯಾವೊಬ್ಬರೂ ಶಾಸಕರಾಗಿಲ್ಲ. ಲಾಠಿ ಏಟು ತಿಂದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಳ್ಳಲು ನಾವು ಬೇಕು, ಅಧಿಕಾರ ಅನುಭವಿಸಲು ಬೇರೆಯವರು ಬೇಕು. ಇದ್ಯಾವ ನ್ಯಾಯ? ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ಒಡನಾಟದಲ್ಲಿದ್ದು, ಅವರ ಮಾರ್ಗದರ್ಶನದ ಮೇರೆಗೆ ಟಿಕೆಟ್ಗಾಗಿ ಮನವಿ ಸಲ್ಲಿಸಿದ್ದೇನೆ. ಈ ಕುರಿತು ಶಿಸ್ತು ಕ್ರಮ ಎಂದು ನೋಟಿಸ್ ನೀಡಿದರೆ, ಪಕ್ಷಕ್ಕೆ ದೊಡ್ಡ ಹೊಡೆತವಾಗಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.