ಹುಬ್ಬಳ್ಳಿ: ರಾಜ್ಯದ ಎಲ್ಲ ಲಿಂಗಾಯತರಿಗೆ ಶೇ 16ರಷ್ಟು ಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಪ್ರವರ್ಗ 3 ಬಿ ಯಲ್ಲಿರುವ ಅಲ್ಲಿಯ ಬಹುಸಂಖ್ಯಾತ ಹಿಂದೂ ಮರಾಠಾ ಸಮಾಜಕ್ಕೆ ಡಿ. 1ರಿಂದಲೇ ಮೀಸಲಾತಿ ಪ್ರಮಾಣವನ್ನು ಒಟ್ಟು ಶೇ 68ಕ್ಕೆ ಏರಿಕೆ ಮಾಡಿದೆ. ಸುಪ್ರೀಂ ಕೋರ್ಟ್ 2010ರಲ್ಲಿ ನೀಡಿದ ಆದೇಶದಂತೆ ಖಚಿತ ವೈಜ್ಞಾನಿಕ ದಾಖಲೆಗಳು ಇದ್ದಲ್ಲಿ ಸರ್ಕಾರ ಮೀಸಲು ಪ್ರಮಾಣ ಶೇ 50ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ರಾಜ್ಯದಲ್ಲಿಯೂ ಇದನ್ನು ಜಾರಿಗೆ ತರಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ರಾಜ್ಯದ ಬಹುಸಂಖ್ಯಾತರಾದ ಪ್ರವರ್ಗ 3ಬಿ ಯಲ್ಲಿರುವ ಲಿಂಗಾಯತ ಸಮಾಜಕ್ಕೆ ಈಗಿರುವ ಶೇ 50ರಷ್ಟು ಮೀಸಲಾತಿ ಕಡಿತಗೊಳಿಸದೇ, ಒಟ್ಟು ಮೀಸಲಾತಿಯನ್ನು ಶೇ 66ಕ್ಕೆ ಹೆಚ್ಚಿಸಬೇಕು. ರಾಜ್ಯದಲ್ಲಿಯೂ ಬೇರೆ, ಬೇರೆ ಸಮಾಜದವರು ತಮ್ಮ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲು ಬೇಡಿಕೆ ಇಟ್ಟಿದ್ದಾರೆ. ಅದೇ ರೀತಿ ನಮ್ಮ ಮನವಿಯನ್ನೂ ಪುರಸ್ಕರಿಸಬೇಕು. ಲಿಂಗಾಯತ ಸಮಾಜದಲ್ಲಿ ಶೇ 80ರಷ್ಟು ಜನ ಬಡವರಿದ್ದಾರೆ. ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು’ ಎಂದಿದ್ದಾರೆ.
‘1981ರಲ್ಲಿ ತಮಿಳುನಾಡಿನಲ್ಲಿ ಶೇ 69ರಷ್ಟು ಮತ್ತು ಹರಿಯಾಣದಲ್ಲಿ ಶೇ 70ರಷ್ಟು ಮೀಸಲಾತಿ ಜಾರಿಗೆ ತರಲಾಗಿದೆ. ಇದೇ ಮಾದರಿ ಮಹಾರಾಷ್ಟ್ರ ಅನುಸರಿಸಿದೆ. ರಾಜ್ಯದಲ್ಲಿಯೂ ಮೀಸಲಾತಿ ಹೆಚ್ಚಿಸಲು ಸರ್ಕಾರ ಆಯೋಗ ರಚಿಸಿದರೆ ಅಥವಾ ಅಧಿಕಾರಿಗಳ ಸಭೆ ನಡೆಸಿದರೆ ಎಲ್ಲ ದಾಖಲೆಗಳನ್ನು ಒದಗಿಸಲು ಸಿದ್ಧ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.