ADVERTISEMENT

‘ಕೆರೆ ಶುಚಿತ್ವಕ್ಕೆ ಸೂಕ್ತ ಕ್ರಮವಹಿಸಿ’

ತಿರ್ಲಾಪೂರ ಗ್ರಾಮಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಭೇಟಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 15:50 IST
Last Updated 10 ನವೆಂಬರ್ 2022, 15:50 IST
ನವಲಗುಂದ ತಾಲ್ಲೂಕಿನ ತಿರ್ಲಾಪೂರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ ಇಟ್ನಾಳ ಗ್ರಾಮವನ್ನು ವೀಕ್ಷಿಸಿದರು. ತಹಶೀಲ್ದಾರ್ ಅನಿಲ ಬಡಿಗೇರ, ತಾ.ಪಂ.ಇಒ ಎಂ.ಎಸ್.ಕಾಂಬ್ಳೆ ಇದ್ದಾರೆ
ನವಲಗುಂದ ತಾಲ್ಲೂಕಿನ ತಿರ್ಲಾಪೂರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ ಇಟ್ನಾಳ ಗ್ರಾಮವನ್ನು ವೀಕ್ಷಿಸಿದರು. ತಹಶೀಲ್ದಾರ್ ಅನಿಲ ಬಡಿಗೇರ, ತಾ.ಪಂ.ಇಒ ಎಂ.ಎಸ್.ಕಾಂಬ್ಳೆ ಇದ್ದಾರೆ   

ನವಲಗುಂದ: ತಾಲ್ಲೂಕಿನ ತಿರ್ಲಾಪೂರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ ಇಟ್ನಾಳ ಅವರು ಗ್ರಾಮದಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ವೀಕ್ಷಣೆ ಮಾಡಿ ಅದರ ಸ್ವಚ್ಛತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೂತನ ಕುಡಿಯುವ ನೀರಿನ ಕೆರೆ ನಿರ್ಮಾಣಕ್ಕೆ ಯೋಗೇಶ್ವರ ಏತ ನೀರಾವರಿ ಯೋಜನೆ ಅಡಿಯಲ್ಲಿ ಸರ್ಕಾರ ₹30 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದು ಅನುಮೋದನೆ ನೀಡಬೇಕಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ಟೆಂಡರ್ ಕರೆಯಲಾಗುವುದು’ ಎಂದು ಇಟ್ನಾಳ ಹೇಳಿದರು.

ADVERTISEMENT

ನರೇಗಾ ಯೋಜನೆಯ ಅನುದಾನದಡಿ ಗ್ರಾಮದ ಕೆಟ್ಟು ಹೋದ ರಸ್ತೆಗಳನ್ನು ದುರಸ್ತಿ ಮಾಡಿ, ಹೆಚ್ಚಿನ ಅನುದಾನದ ಅಗತ್ಯವಿದ್ದರೆ ಪ್ರಸ್ತಾವ ಸಲ್ಲಿಸಬೇಕು. ಜೆಜೆಎಂ ಅಡಿಯಲ್ಲಿ ಪೈಪ್‌ಲೈನ್‌ ಅಳವಡಿಸಲು ರಸ್ತೆಗಳನ್ನು ಅಗೆದು ರಸ್ತೆ ಹಾಳಾಗಿ ಹೋಗಿವೆ. ಕೂಡಲೇ ಕುಡಿಯುವ ನೀರು ಪೂರೈಸುವ ನಳ ಜೋಡಣೆ ಮಾಡಿ ಗ್ರಾಮದ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಿ ಎಂದೂ ಅವರು ಅಧಿಕಾರಿಗಳಿಗೆ ಹೇಳಿದರು.

ಗ್ರಾಮದಿಂದ ಮಲಪ್ರಭಾ ಕಾಲುವೆ ವರೆಗೆ ಇರುವ ಹೆಬ್ಬಳ್ಳಿ ರಸ್ತೆಯನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಅಳತೆ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು..

ಗ್ರಾಮದ ಎಲ್ಲಡೆ ಸಂಚರಿಸಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಗ್ರಾಮ ಒನ್ ಕೇಂದ್ರ ವೀಕ್ಷಿಸಿದರು.

ತಹಶೀಲ್ದಾರ್ ಅನಿಲ ಬಡಿಗೇರ, ತಾಲ್ಲೂಕು ಪಂಚಾಯ್ತಿ ಇಒ ಎಂ.ಎಸ್.ಕಾಂಬ್ಳೆ, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್.ಲಂಗೋಟಿ, ಪಿಡಿಒ ವೀರನಗೌಡ ಪಾಟೀಲ, ಕಾರ್ಯದರ್ಶಿ ಎಂ.ಪಿ.ಲಾಳಸಂಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾ ಮರಿಸಿದ್ದನ್ನವರ, ಉಪಾಧ್ಯಕ್ಷ ಮಹೇಶ್ ಬಕ್ಕಣ್ಣವರ, ಸದಸ್ಯರಾದ ಬಸವರಾಜ ಆಕಳದ, ಸಂಜಿವರಡ್ಡಿ ನವಲಗುಂದ, ಚಿನ್ನಪ್ಪ ಸಂಶಿ, ಮಲ್ಲಿಕಾರ್ಜುನ ಮೆಣಸಿನಕಾಯಿ, ವೀರೇಶ ಸೋಬರದಮಠ, ರಾಮಲಿಂಗಪ್ಪ ಪೂಜಾರಿ, ಸಿದ್ದಪ್ಪ ಮರಿಸಿದ್ದಣ್ಣವರ, ಪ್ರಕಾಶ ಪೂಜಾರ, ವಸಂತ ಕಾಲವಾಡ ಹಾಗೂ ಪಂಚಾಯ್ತಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.