ADVERTISEMENT

ತಗ್ಗದ ಅಪಘಾತ ಪ್ರಕರಣ: ಆತಂಕ

ದಂಡ, ಜಾಗೃತಿಯಂಥ ಕ್ರಮ ಕೈಗೊಂಡರೂ ನಿಯಂತ್ರಣವಿಲ್ಲ

ಗೋವರ್ಧನ ಎಸ್‌.ಎನ್‌.
Published 31 ಮಾರ್ಚ್ 2022, 3:58 IST
Last Updated 31 ಮಾರ್ಚ್ 2022, 3:58 IST
ಪಟ್ಟಿ
ಪಟ್ಟಿ   

ಹುಬ್ಬಳ್ಳಿ: ವಿವಿಧ ಕಾರಣಗಳಿಂದಾಗಿ ನಗರದೊಳಗೆ ಹಾಗೂ ಹೊರವಲಯದಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳು ಸಂಭವಿಸುತ್ತಲೇಇದ್ದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ವೇಗದ ಚಾಲನೆ, ಮದ್ಯಸೇವಿಸಿ ವಾಹನ ಚಾಲನೆ, ರಸ್ತೆ ದುರವಸ್ತೆ ಮೊದಲಾದ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ನಿಯಮಗಳ ಪಾಲನೆಗೆ ಸಂಚಾರ ಪೊಲೀಸರು ದಂಡ, ಜಾಗೃತಿಯಂತಹ ಕ್ರಮಗಳನ್ನು ಕೈಗೊಂಡರೂ ಅಪಘಾತಗಳ ಸಂಖ್ಯೆ ನಿಯಂತ್ರಿಸಲಾಗುತ್ತಿಲ್ಲ.

2021ರಲ್ಲಿ 428 ರಸ್ತೆ ಅಪಘಾತಗಳು ಸಂಭವಿಸಿದ್ದು, 113 ಮಂದಿ ಮರಣ ಹೊಂದಿದ್ದಾರೆ. 2022 ಜನವರಿ 12ರವರೆಗೆ ನಡೆದ 10 ಅಪಘಾತಗಳಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಬೈಪಾಸ್‍ ರಸ್ತೆಯಲ್ಲಿ 2021ರಲ್ಲಿ 15 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಪೂರ್ವ ಹಾಗೂ ದಕ್ಷಿಣ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ 9 ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಈ ಪೈಕಿ 6 ವಲಯಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ, ಉಳಿದೆಡೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಚಾರ ಪೊಲೀಸ್‍ ಇಲಾಖೆಯ ಮಾಹಿತಿಯಲ್ಲಿ ತಿಳಿಸಲಾಗಿದೆ.

‘ಹೆಲ್ಮೆಟ್‍ ಧರಿಸದೆ ಬೈಕ್‍ ಚಲಾಯಿಸುವುದರಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಸಾವು-ನೋವು ಸಂಭವಿಸುತ್ತಿವೆ. ಹೆಲ್ಮೆಟ್‍ ಧರಿಸದವರಿಗೆ ದಂಡ ಹಾಕಿ, ತಿಳಿ ಹೇಳಿ ಕಳಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಗರದೊಳಗೆ ವೇಗದ ಮಿತಿ 40-50ಕ್ಕೆ ಸೀಮಿತಗೊಳಿದ್ದರೂ, ಕೆಲವರು ವೇಗವಾಗಿ ವಾಹನ ಚಲಾಯಿಸುವುದು ಅಪಘಾತಕ್ಕೆ ಪ್ರಮುಖ ಕಾರಣ. ಪ್ರತಿ ಜೀವ ಅಮೂಲ್ಯವಾಗಿರುವ ಕಾರಣ ಚಾಲಕರು ನಿರ್ಲಕ್ಷ್ಯ ಮಾಡಬಾರದು’ ಎಂದು ಸಂಚಾರ ಪೊಲೀಸರು ತಿಳಿಸುತ್ತಾರೆ.

ಹದಗೆಟ್ಟ ರಸ್ತೆಗಳು, ಸಿಗ್ನಲ್‍ ತೊಂದರೆ, ವೈಜ್ಞಾನಿಕ ತಿರುವುಗಳು ಹಾಗೂ ಇಂತಹ ಸಮಸ್ಯೆಗಳನ್ನು ಪರಿಹರಿಸದ ಕಾರಣದಿಂದಲೂ ಅಪಘಾತಗಳು ಹೆಚ್ಚುತ್ತಿವೆ ಎಂಬುದು ಜನರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.