ಹುಬ್ಬಳ್ಳಿ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸಪ್ತಾಹದ ಹಿನ್ನೆಲೆಯಲ್ಲಿ ಗರ್ಭಿಣಿಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹುಬ್ಬಳ್ಳಿ–ಧಾರವಾಡ ಶಹರದ ವತಿಯಿಂದ ಮಂಗಳವಾರ ನಗರದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕಿಮ್ಸ್ ಮುಖ್ಯ ಗೇಟ್ನಿಂದ ಆರಂಭವಾದ ಜಾಥಾ ಆವರಣದಲ್ಲೆಲ್ಲ ಸಂಚರಿಸಿತು. ಅಂಗನವಾಡಿ ಕಾರ್ಯಕರ್ತೆಯರು, ಮಾತೃವಂದನಾ ಯೋಜನೆಯ ಫಲಾನುಭವಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕಿಮ್ಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಸೆಲ್ಫಿ ಕಾರ್ನರ್ನಲ್ಲಿ ಫಲಾನುಭವಿಗಳು ಫೋಟೊ ತೆಗೆದುಕೊಂಡರು.
ಡಿ. 2ರಿಂದ ಆರಂಭವಾಗಿರುವ ಸಪ್ತಾಹದಲ್ಲಿ ಆಯಾ ಅಂಗನವಾಡಿ ವಲಯಗಳಲ್ಲಿ ಮೊದಲ ದಿನ ಉದ್ಘಾಟನಾ ಸಮಾರಂಭ ನಡೆದಿತ್ತು. ಎರಡನೇ ದಿನ ಜಾಥಾ ಜರುಗಿತು. ಬುಧವಾರ ಗರ್ಭಿಣಿಯರ ನೋಂದಣಿ ಮತ್ತು ಯೋಜನೆಯ ಮಹತ್ವದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮಾಹಿತಿ ನೀಡುತ್ತಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಹುಬ್ಬಳ್ಳಿ–ಧಾರವಾಡ ಶಹರದ ಹೆಚ್ಚುವರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಹೆಬ್ಬಳ್ಳಿ, ಮೇಲ್ವಿಚಾರಕಿಯರಾದ ರತ್ನಾ ಪಾಟೀಲ, ಚನ್ನಮ್ಮ ನಂಜಯ್ಯನಮಠ, ಸುಮಂಗಲಾ ಬಸಾಪುರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.