ಹುಬ್ಬಳ್ಳಿ: ‘ಮಾತೃಪೂರ್ಣ’ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ 2024ರ ಸೆಪ್ಟೆಂಬರ್ನಿಂದ ಅಂಗನವಾಡಿ ಕೇಂದ್ರಗಳ ಮೂಲಕ ಮನೆ ಬಾಗಿಲಿಗೆ ಪೌಷ್ಟಿಕ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಆದರೆ, ಅದರ ಪ್ರಮಾಣ ಕಡಿಮೆ ಆಗುತ್ತಿದೆ ಮತ್ತು ಬಿಡಿಯಾಗಿ ವಿತರಿಸಲಾಗುತ್ತಿದೆ. ಪ್ಯಾಕೆಟ್ ರೂಪದಲ್ಲಿ ವಿತರಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಆಯಾ ತಿಂಗಳ ಭಾನುವಾರ ಮತ್ತು ವಿಶೇಷ ರಜೆಗಳು ಹೊರತುಪಡಿಸಿ, ಇತರ ದಿನಗಳಲ್ಲಿ ಪೌಷ್ಟಿಕ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ದಿನಕ್ಕೆ ₹21 ವೆಚ್ಚದ ಸಾಮಗ್ರಿ ವಿತರಿಸುವ ಮಾನದಂಡವಿದ್ದು, ಎಲ್ಲವನ್ನೂ ಒಟ್ಟಿಗೆ ನೀಡಲಾಗುತ್ತದೆ.
ಸೆಪ್ಟೆಂಬರ್ನಲ್ಲಿ ಅಕ್ಕಿ (2.338 ಕೆಜಿ), ಹೆಸರುಕಾಳು (296 ಗ್ರಾಂ), ಅಡುಗೆ ಎಣ್ಣೆ(105 ಗ್ರಾಂ), ಉಪ್ಪು (135 ಗ್ರಾಂ), ಸಾಂಬಾರ್ ಮಸಾಲ (178 ಗ್ರಾಂ), ಗೋಧಿ ಗ್ರಿಟ್ (ರವೆ)(1346 ಗ್ರಾಂ), ಉಪ್ಪಿಟ್ಟು ಮಸಾಲ ಮಿಕ್ಸ್(92 ಗ್ರಾಂ), ಹಾಲಿನ ಪುಡಿ(375 ಗ್ರಾಂ), ಸಕ್ಕರೆ(125 ಗ್ರಾಂ), 25 ಮೊಟ್ಟೆ ವಿತರಿಸಲಾಗಿದೆ. ನವೆಂಬರ್ನಲ್ಲಿ ಮೆನು ಬದಲಾಗಿದೆ. ಕಡ್ಲೆಬೇಳೆ, ಬೆಲ್ಲ, ಸಾಸಿವೆ ಸೇರಿಸಿ, ಇನ್ನುಳಿದ ಆಹಾರ ಸಾಮಗ್ರಿಗಳ ಪ್ರಮಾಣ ಕಡಿಮೆ ಮಾಡಲಾಯಿತು.
2025ರ ಜನವರಿಯಲ್ಲಿ ಮೆನು ಬದಲಾಯಿಸಿ, ರಾಗಿ ಲಡ್ಡು ಸೇರಿಸಲಾಯಿತು. ಫೆಬ್ರುವರಿಯಲ್ಲಿ ಅಕ್ಕಿ (674ಗ್ರಾಂ), ಹೆಸರುಕಾಳು (95 ಗ್ರಾಂ), ಅಡುಗೆ ಎಣ್ಣೆ(57 ಗ್ರಾಂ), ಉಪ್ಪು (50 ಗ್ರಾಂ), ಸಾಂಬಾರ್ ಮಸಾಲ (133ಗ್ರಾಂ), ಗೋಧಿ ಗ್ರಿಟ್(ರವೆ) (927 ಗ್ರಾಂ), ಉಪ್ಪಿಟ್ಟು ಮಸಾಲ ಮಿಕ್ಸ್(76 ಗ್ರಾಂ), ಹಾಲಿನ ಪುಡಿ(330 ಗ್ರಾಂ), ಸಕ್ಕರೆ(110 ಗ್ರಾಂ), ಕಡ್ಲಿಬೇಳೆ(41ಗ್ರಾಂ), ಬೆಲ್ಲ(95ಗ್ರಾಂ), ಸಾಸಿವೆ (8 ಗ್ರಾಂ), 22 ಮೊಟ್ಟೆ ವಿತರಿಸಲಾಗಿದೆ.
‘ಹೀಗೆ ಬಿಡಿಯಾಗಿ ವಿತರಿಸುವುದು ನಮಗೆ ಹೆಚ್ಚುವರಿ ಕೆಲಸವಾಗಿದೆ. ಜೊತೆಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಕಡಿಮೆ ಪ್ರಮಾಣದಲ್ಲಿ ವಿತರಿಸುತ್ತಿರುವ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯಲ್ಲಿ ಈಚೆಗೆ ಅಂಗನವಾಡಿ ಕೇಂದ್ರವೊಂದರಲ್ಲಿ ಆಹಾರ ಸಾಮಗ್ರಿ ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಾಗಿನಿಂದ ಫಲಾನುಭವಿಗಳು ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ಮಾನದಂಡ ಅನುಸಾರ ವಿತರಿಸಿದರೂ ಕೆಲವರಿಗೆ ಇನ್ನೂ ಅನುಮಾನವಿದೆ. ಹೀಗಾಗಿ ಸರ್ಕಾರವೇ ಪ್ಯಾಕೆಟ್ ರೂಪದಲ್ಲಿ ಆಹಾರ ಸಾಮಗ್ರಿ ವಿತರಿಸಿದರೆ ಅನುಕೂಲ’ ಎಂದು ಅಂಗನವಾಡಿ ಕೇಂದ್ರದ ಶಿಕ್ಷಕಿ ತಿಳಿಸಿದರು.
‘ತಿಂಗಳಿನಿಂದ ತಿಂಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳ ವಿತರಣೆ ಪ್ರಮಾಣ ಕಡಿಮೆಯಾಗಿದೆ. ಅನುಮಾನಗಳಿಗೆ ಆಸ್ಪದ ಮಾಡಿಕೊಡದೇ ಸರ್ಕಾರವು ಆಹಾರ ಸಾಮಗ್ರಿಗಳನ್ನು ಪ್ಯಾಕೆಟ್ ರೂಪದಲ್ಲಿ ನೀಡಬೇಕು’ ಎಂದು ಯೋಜನೆಯ ಫಲಾನಭವಿಯೊಬ್ಬರು ತಿಳಿಸಿದರು.
Cut-off box - ‘ಪ್ಯಾಕೆಟ್ನಲ್ಲಿ ನೀಡಲು ಬೇಡಿಕೆ’ ‘2017ರಲ್ಲಿ ಯೋಜನೆ ಆರಂಭವಾದಾಗಿನಿಂದ ಅಂಗನವಾಡಿ ಕೇಂದ್ರಗಳಿಗೆ ಗರ್ಭಿಣಿಯರು ಬಾಣಂತಿಯರು ಬಂದು ಊಟ ಮಾಡಬೇಕಿತ್ತು. ಹಲವರು ಅಂಗನವಾಡಿ ಕೇಂದ್ರಗಳಿಗೆ ಬಾರದ ಕಾರಣ ಮತ್ತು ಕೆಲವರು ಮನೆಗೆ ಆಹಾರ ಸಾಮಗ್ರಿ ನೀಡುವಂತೆ ಬೇಡಿಕೆ ಇಟ್ಟಿದ್ದರಿಂದ ಮನೆ ಬಾಗಿಲಿಗೆ ಆಹಾರ ಸಾಮಗ್ರಿ ನೀಡುತ್ತಿದ್ದೇವೆ. ಹೆಚ್ಚು ಪೌಷ್ಟಿಕ ಆಹಾರ ಸಾಮಗ್ರಿ ಸೇರಿಸಿರುವುದರಿಂದ ವಿತರಿಸುವ ಪ್ರಮಾಣ ಕಡಿಮೆಯಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ ಹಾಗೂ ಪ್ರಭಾರ ಉಪನಿರ್ದೇಶಕಿ ಕಮಲಾ ಬೈಲೂರು ತಿಳಿಸಿದರು. ‘ಫಲಾನುಭವಿಗಳಿಗೆ ವಿತರಿಸುವ ಸಾಮಗ್ರಿಯಲ್ಲಿ ವ್ಯತ್ಯಾಸ ಆಗದಂತೆ ಆಗಾಗ ಸಭೆ ನಡೆಸಲಾಗುತ್ತಿದೆ. ಸೂಪರ್ವೈಸರ್ಗಳು ಹಾಗೂ ಸಿಡಿಪಿಒಗಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಸರ್ಕಾರ ನೀಡಿದ ಮಾನದಂಡದ ಮೇಲೆ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ. ಫಲಾನುಭವಿಗಳು ಅನುಮಾನ ಪಡಬೇಕಿಲ್ಲ.ಆಹಾರ ಸಾಮಗ್ರಿ ವಿತರಿಸುವ ಎಂಎಸ್ಪಿಸಿಗೆ (ವುಮನ್ ಸಪ್ಲಿಮೆಂಟರಿ ನ್ಯೂಟ್ರಿಷನ್ ಸೆಂಟರ್)ಗೆ ಪ್ಯಾಕೆಟ್ ರೂಪದಲ್ಲಿ ನಿಡುವಂತೆ ಬೇಡಿಕೆ ಇಟ್ಟಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.