ಹುಬ್ಬಳ್ಳಿ: ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಅನಗತ್ಯವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ವ್ಯಾಪಾರಿಗಳು ಶುಕ್ರವಾರ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷಾ ವಾಹನ ಮಾರುಕಟ್ಟೆ ಸಮೀಪಕ್ಕೆ ಬರುತ್ತಿದ್ದಂತೆಯೇ ಅಂಗಡಿ ಬಾಗಿಲು ಹಾಕಿ ಹೋಗಿದ್ದಾರೆ.
ಜಿಲ್ಲಾಡಳಿತ ರ್ಯಾಪಿಡ್ ಆ್ಯಂಟಿಜನ್ ಮೂಲಕ ಎರಡು ದಿನಗಳಿಂದ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಿಸಿ ಅರ್ಧ ಗಂಟೆಯಲ್ಲೇ ಪರೀಕ್ಷಾ ವರದಿ ತಿಳಿಸುತ್ತಿದೆ. ಸೋಂಕು ದೃಢಪಟ್ಟ ವ್ಯಕ್ತಿಗಳನ್ನು ತಕ್ಷಣವೇ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ.
ಶುಕ್ರವಾರ ನಗರದ ದುರ್ಗದ ಬೈಲ್, ಹರ್ಷಾ ಕಾಂಪ್ಲೆಕ್ಸ್ ಮತ್ತು ಜನತಾ ಬಜಾರ್ನಲ್ಲಿ ವ್ಯಾಪಾರದಲ್ಲಿ ತೊಡಗಿದ್ದವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಹರ್ಷಾ ಕಾಂಪ್ಲೆಕ್ಸ್ ಬಳಿ 27 ಅಂಗಡಿಗಳ 65 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ. ಎರಡು ಅಂಗಡಿಗಳನ್ನು ಸೀಲ್ಡೌನ್ ಮಾಡಲಾಗಿದೆ.
ಜನತಾ ಬಜಾರ್ನಲ್ಲಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷಾ ವಾಹನ ಹಾಗೂ ಸಿಬ್ಬಂದಿ ಬರುತ್ತಿದ್ದಂತೆ ಅಲ್ಲಿನ ಬಹಳಷ್ಟು ವ್ಯಾಪಾರಿಗಳು ಅಂಗಡಿ ಬಾಗಿಲು ಹಾಕಿದರು. ಇನ್ನೂ ಕೆಲವರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಗಾದರು.
ಜನತಾ ಬಜಾರ್ನಲ್ಲಿ ಬೀದಿ ಬದಿ ವ್ಯಾಪಾರದಲ್ಲಿ ತೊಡಗಿದ್ದ ಪಾರ್ವೆತವ್ವ ಎಂಬುವರು ಈ ಕುರಿತು ಪ್ರತಿಕ್ರಿಯಿಸಿ ‘ಸೋಂಕಿನ ಯಾವ ಲಕ್ಷಣಗಳು ಇಲ್ಲದಿದ್ದರೂ ಅಧಿಕಾರಿಗಳ ಒತ್ತಾಯಕ್ಕೆ ಪರೀಕ್ಷೆಗೆ ಒಳಗಾಗಬೇಕಿದೆ. ಇದರಿಂದ ವ್ಯಾಪಾರಿಗಳಿಗೂ ಹಾಗೂ ಗ್ರಾಹಕರಿಗೆ ಬಹಳಷ್ಟು ಕಿರಿಕಿರಿಯಾಗುತ್ತಿದೆ’ ಎಂದು ದೂರಿದರು. ಗುರುವಾರ ದುರ್ಗದ ಬೈಲ್ನಲ್ಲಿ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಿದ್ದು ಮಾರುಕಟ್ಟೆ ವ್ಯಾಪಾರದ ಮೇಲೂ ಪರಿಣಾಮ ಬೀರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.