ಹುಬ್ಬಳ್ಳಿ: ‘ಹುಬ್ಬಳ್ಳಿ–ಅಂಕೋಲ ರೈಲು ಮಾರ್ಗ ಯೋಜನೆ ಸಂಬಂಧ ವನ್ಯಜೀವಿ ಮಂಡಳಿ, ಅರಣ್ಯ ಮಂಡಳಿ ಮತ್ತು ಅರಣ್ಯ ಇಲಾಖೆಯ ಸಲಹೆ–ಸೂಚನೆ ಒಳಗೊಂಡ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದ್ದು, ಯೋಜನೆ ಶೀಘ್ರ ಜಾರಿಯಾಗುವ ಆಶಾಭಾವನೆ ಇದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ರೈಲ್ಸೌಧದಲ್ಲಿ ಜನಪ್ರತಿನಿಧಿಗಳು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದ್ವಿಮಾರ್ಗ ನಿರ್ಮಾಣ ಸೇರಿ ಮಂಡಳಿಗಳು ಸೂಚಿಸಿದ ಎಲ್ಲ ಅಂಶಗಳು ವರದಿಯಲ್ಲಿವೆ. ₹ 17 ಸಾವಿರ ಕೋಟಿ ಮೊತ್ತದ ಡಿಪಿಆರ್ ಸಿದ್ಧಗೊಂಡಿದೆ. ರೈಲ್ವೆ ಮಂಡಳಿಗೆ ಕಳುಹಿಸಿ, ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದರ ಅನುಮೋದನೆಗೆ ಶ್ರಮಿಸುವೆ’ ಎಂದರು.
‘ಬೆಳಗಾವಿ–ಧಾರವಾಡ ರೈಲು ಮಾರ್ಗ ಯೋಜನೆಯೂ ಮುಖ್ಯವಾಗಿದ್ದು, 42 ಎಕರೆ ಭೂ ಸ್ವಾಧೀನಕ್ಕೆ ಉಂಟಾಗಿರುವ ಅಡ್ಡಿಯನ್ನು ರಾಜ್ಯ ಸರ್ಕಾರ ಸರಿಪಡಿಸಬೇಕಿದೆ. ಸಮಸ್ಯೆ ಪರಿಹಾರವಾದರೆ ಹುಬ್ಬಳ್ಳಿ–ಧಾರವಾಡ ಮಾತ್ರವಲ್ಲದೆ, ಸುತ್ತಲಿನ ಎಲ್ಲ ಜಿಲ್ಲೆಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಹುಬ್ಬಳ್ಳಿ–ಅಂಕೋಲ ರೈಲ್ವೆ ಮಾರ್ಗ ಯೋಜನೆ ಮೂಲಕ ಬಂದರು ಸಂಪರ್ಕ ಸುಲಭವಾಗುವುದರಿಂದ ಬೆಳಗಾವಿಯಿಂದ ಸರಕುಗಳನ್ನು ನೇರವಾಗಿ ಸಾಗಿಸಬಹುದು’ ಎಂದು ಹೇಳಿದರು.
ಕ್ರೀಡಾಂಗಣ ಅಭಿವೃದ್ಧಿ: ‘ರೈಲ್ವೆ ಮೈದಾನದಲ್ಲಿ ₹9 ಕೋಟಿ ವೆಚ್ಚದ ಹಾಕಿ ಟರ್ಫ್ ನಿರ್ಮಾಣದ ಪ್ರಸ್ತಾವ ಮಂಡಳಿಯಲ್ಲಿದ್ದು, ಶೀಘ್ರ ವಿಲೇವಾರಿ ಮಾಡಲಾಗುತ್ತದೆ. ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಈಗಾಗಲೇ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದ್ದು, ಅವುಗಳಲ್ಲಿ ಇಲ್ಲದ ಕ್ರೀಡಾಂಕಣಗಳನ್ನು ರೈಲ್ವೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿರುವೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಇಲ್ಲಿ ಆಯೋಜಿಸಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
‘ರೈಲ್ವೆ ಇಲಾಖೆಯಿಂದ ಪಾವತಿ ಆಗಬೇಕಿರುವ ತೆರಿಗೆ ಕುರಿತು ಹು–ಧಾ ಮಹಾನಗರ ಪಾಲಿಕೆ ಮೇಯರ್ ವಿಷಯ ಪ್ರಸ್ತಾಪಿಸಿದ್ದಾರೆ. ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಇಲಾಖೆಗಳು ಹೆಚ್ಚು ಪಾರದರ್ಶಕ ಆಗಿರುವುದರಿಂದ, ಇವುಗಳಲ್ಲಿನ ಪ್ರಕ್ರಿಯೆ ಸುಲಭವಾಗಿರುವುದಿಲ್ಲ. ಬಹುತೇಕ ಪ್ಯಾಸೇಂಜರ್ ರೈಲುಗಳು ನಷ್ಟದಲ್ಲೇ ಸಂಚರಿಸುತ್ತಿವೆ. ತೆರಿಗೆ ಪಾವತಿ ಕುರಿತು ಪರಿಶೀಲಿಸಲು ತಿಳಿಸಿರುವೆ’ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹು–ಧಾ ಮಹಾನಗರ ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.
₹400 ಕೋಟಿಯಲ್ಲಿ ಮೇಲ್ದರ್ಜೆಗೆ’
ಹುಬ್ಬಳ್ಳಿ ಎಸ್.ಎಸ್.ಎಸ್. ರೈಲುನಿಲ್ದಾಣ ಮೇಲ್ದರ್ಜೆಗೇರಿಸುವ ₹400 ಕೋಟಿ ಮೊತ್ತದ ಡಿಪಿಆರ್ ಅನುಮೋದನೆಗೆ ಯತ್ನಿಸಲಾಗುತ್ತದೆ. ಅಮೃತ ನಿಲ್ದಾಣ ಯೋಜನೆಯಡಿ ಅಭಿವೃದ್ಧಿಪಡಿಸಿದ ಅಳ್ನಾವರ ರೈಲು ನಿಲ್ದಾಣವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುತ್ತದೆ’ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ‘ತುಮಕೂರು–ಚಿತ್ರದುರ್ಗ ರೈಲು ಮಾರ್ಗ ನಿರ್ಮಾಣವು 2028ರೊಳಗೆ ಪೂರ್ಣಗೊಳ್ಳಲಿದೆ. ಇದರಿಂದ ಧಾರವಾಡ–ಬೆಂಗಳೂರು ನಡುವಿನ ಒಟ್ಟು ಪ್ರಯಾಣದಲ್ಲಿ ಒಂದು ತಾಸು ಉಳಿತಾಯವಾಗುತ್ತದೆ. ಗದಗ- ಧಾರವಾಡ ನಿರಂತರ ಪ್ಯಾಸೆಂಜರ್ ರೈಲು ಸಂಚಾರವನ್ನು ಶೀಘ್ರ ಆರಂಭಿಸಲಾಗುತ್ತದೆ’ ಎಂದರು. ‘ಹುಬ್ಬಳ್ಳಿ ಆರ್ಟಿಒ ಕಚೇರಿ ಬಳಿ ರಸ್ತೆ ಅಂಡರ್ ಬ್ರಿಜ್ ಮತ್ತು ರಸ್ತೆ ಅಂಡರ್ ಪಾಸ್ ನಿರ್ಮಿಸಲಾಗುತ್ತದೆ. ಗದಗದಲ್ಲಿ ಅಂಡರ್ ಬ್ರಿಜ್ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಕೆಯಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.