ADVERTISEMENT

ಕಿಮ್ಸ್‌ಗೆ ರೊಬೊಟಿಕ್ ವಾಹನ ಹಸ್ತಾಂತರ

ಕೆಎಲ್‌ಇ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 14:38 IST
Last Updated 7 ಅಕ್ಟೋಬರ್ 2020, 14:38 IST
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ‘ಪ್ರಧಾಯ’ ಹೆಸರಿನ ಸ್ವಯಂಚಾಲಿಕ ರೊಬೊಟಿಕ್ ವಾಹನವನ್ನು ಸಚಿವ ಜಗದೀಶ ಶೆಟ್ಟರ್ ಅನಾವರಣಗೊಳಿಸಿದರು
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ‘ಪ್ರಧಾಯ’ ಹೆಸರಿನ ಸ್ವಯಂಚಾಲಿಕ ರೊಬೊಟಿಕ್ ವಾಹನವನ್ನು ಸಚಿವ ಜಗದೀಶ ಶೆಟ್ಟರ್ ಅನಾವರಣಗೊಳಿಸಿದರು   

ಹುಬ್ಬಳ್ಳಿ: ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ‘ಪ್ರಧಾಯ’ ಹೆಸರಿನ ಸ್ವಯಂಚಾಲಿಕ ರೊಬೊಟಿಕ್ ವಾಹನವನ್ನು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬುಧವಾರ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ‘ಆಸ್ಪತ್ರೆಗಳಲ್ಲಿ ರೋಗಿಗಳ ವಾರ್ಡ್‌ಗಳಿಗೆ ಆಹಾರ ಮತ್ತು ಔಷಧಗಳನ್ನು ಈ ವಾಹನದ ಮೂಲಕ ತಲಪಿಸಬಹುದಾಗಿದೆ.ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಇಂತಹದ್ದೊಂದು ವಾಹನವನ್ನು ಅಭಿವೃದ್ಧಿಪಡಿಸಿರುವುದು ಅಭಿನಂದನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಾದ ಕಿರಣ್ ಕೆ., ಸಂತೋಷ್ ಕೆ., ಮದನ್ ವೈ., ಅಭಿಲಾಷ್ ಜಿ., ಕಾರ್ತಿಕ್ ಆರ್., ಪ್ರಣವ್ ಕೆ., ಕೆ. ಅಭಿಷೇಕ್, ಅಭಿಷೇಕ್ ಎಚ್. ವಿನಾಯಕ್ ಎಚ್‌. ಹಾಗೂ ರಾಹುಲ್ ಪಿ. ಅವರ ತಂಡ ಈ ವಾಹನವನ್ನು ಅಭಿವೃದ್ಧಿಪಡಿಸಿದೆ.

ADVERTISEMENT

‘ಕಿಮ್ಸ್ ತಜ್ಞ ವೈದ್ಯ ಡಾ.ಎಸ್.ವೈ. ಮುಲ್ಕಿ ಪಾಟೀಲ ಹಾಗೂಡಾ. ರಾಮಲಿಂಗಪ್ಪ ಅಂಟರತಾನಿ ಅವರು, ಕೋವಿಡ್ ಸಂದರ್ಭದಲ್ಲಿ ಸ್ವಯಂಚಾಲಿತ ಮಾರ್ಗದರ್ಶಿ ವಾಹನಗಳನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದ್ದರು’ ಎಂದು ವಿದ್ಯಾರ್ಥಿಗಳು ಹೇಳಿದರು.

‘ಅದರಂತೆ ಕಾರ್ಯಪ್ರವೃತ್ತರಾದ ನಮ್ಮ ತಂಡಕ್ಕೆ ಸ್ವರ್ಣ ಗ್ರೂಪ್‌ನ ಡಾ.ವಿ.ಎಸ್‌.ವಿ. ಪ್ರಸಾದ ಅವರು ಪ್ರಾಯೋಜಕತ್ವ ನೀಡಲು ಮುಂದೆ ಬಂದರು. ತಂಡಕ್ಕೆ ಪ್ರೋತ್ಸಾಹ ನೀಡುವಂತೆ ಹಿಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು,ಕೈಗಾರಿಕೆ ಜಂಟಿ ನಿರ್ದೇಶಕರಾಗಿದ್ದ ಮೋಹನ ಭರಮಕ್ಕನವರ ಅವರಿಗೆ ಸೂಚಿಸಿದ್ದರು. ಪ್ರಾಧ್ಯಾಪಕರಾದ ಡಾ. ರವಿ ಗುತ್ತಲ, ಡಾ.ಎಸ್‌.ಸಿ. ಸಜ್ಜನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನದೊಂದಿಗೆ ವಾಹನ ಅಭಿವೃದ್ಧಿಪಡಿಸಿದೆವು’ ಎಂದು ತಿಳಿಸಿದರು.

ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.