ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಗಣೇಶಪೇಟೆಯಲ್ಲಿ₹5.6 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೀನು ಮಾರುಕಟ್ಟೆಯ ಕಾಮಗಾರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಶುಕ್ರವಾರ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ‘ಮಾರುಕಟ್ಟೆಯನ್ನು ಹೈಟೆಕ್ ಮಾಡಬೇಕು ಎಂಬುದು ಬಹುದಿನಗಳ ಕನಸಾಗಿದೆ. ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗದೆ ಸುಸಜ್ಜಿತವಾಗಿ ಮಾರುಕಟ್ಟೆ ನಿರ್ಮಿಸಬೇಕು’ ಎಂದರು.
‘ಯೋಜನೆ ಪ್ರಕಾರ ಮಾರುಕಟ್ಟೆಯ ಒಳಗಡೆ 38 ಮಳಿಗೆಗಳನ್ನು ನಿರ್ಮಿಸಬಹುದಾಗಿದೆ. ಆದರೆ, ವ್ಯಾಪಾರಿಗಳಿಗೆ ಅದು ಸೂಕ್ತವೆನಿಸುತ್ತಿಲ್ಲ. ಮೀನು ವ್ಯಾಪಾರಸ್ಥರ ಒತ್ತಾಯಿಸುವಂತೆ ಮಳಿಗೆಗಳನ್ನು ಇನ್ನಷ್ಟು ವಿಸ್ತಾರಗೊಳಿಸಿ 36 ಮಳಿಗೆಗಳನ್ನು ನಿರ್ಮಿಸಬೇಕು. ಅದಕ್ಕಾಗಿ, ಪರಿಷ್ಕೃತ ಯೋಜನೆಯನ್ನು ರೂಪಿಸಬೇಕು’ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
‘ಮೀನು ಮಾರುಕಟ್ಟೆಯ ಸ್ವಚ್ಛತೆಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ. ಸದ್ಯ ಇರುವ ಕೊಳವೆಬಾವಿಯ ಜೊತೆಗೆ, ಮತ್ತೊಂದನ್ನು ಕೊರೆಯಿಸಿ’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಾಲಿಕೆ ಸದಸ್ಯರಾದ ಇಲಿಯಾಸ್ ಮನಿಯಾರ್, ನಿರಂಜನ ಹಿರೇಮಠ, ಮುಖಂಡರಾದ ಅಬ್ದುಲ್ ಹಮೀದ್ ಖೈರಾತಿ, ಫರ್ವೇಜ್ ಕೊಣ್ಣೂರು, ಇರ್ಷಾದ್ ಕುಸುಗಲ್, ಎಂಜಿನಿಯರ್ ಎನ್.ಎಚ್. ತಡಕೋಡ, ಪಾಲಿಕೆಯ ವಲಯಾಧಿಕಾರಿ ಬಸವರಾಜ ಲಮಾಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.