ADVERTISEMENT

ಶ್ರೀಕಾಂತ ಬಂಧನ: ಇನ್‌ಸ್ಪೆಕ್ಟರ್‌ ಅಮಾನತು ಮಾಡುವ ಪ್ರಶ್ನೆಯೇ ಇಲ್ಲ: ಅಬ್ಬಯ್ಯ

ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 23:03 IST
Last Updated 4 ಜನವರಿ 2024, 23:03 IST
   

ಹುಬ್ಬಳ್ಳಿ: ‘1992ರ ಗಲಭೆ ಪ್ರಕರಣದಲ್ಲಿ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಿದ ಶಹರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಅವರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ಅಂತಹ ಖಡಕ್‌ ಅಧಿಕಾರಿಯನ್ನು ಇಲ್ಲಿಯೇ ಉಳಿಸಿಕೊಳ್ಳುತ್ತೇವೆ’ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈಕೋರ್ಟ್‌ ಆದೇಶದ ಅನುಸಾರ ಸ್ಥಳೀಯ ನ್ಯಾಯಾಲಯದ ಸೂಚನೆಯಂತೆ ದೀರ್ಘಾವಧಿ ಬಾಕಿ ಉಳಿದ ಪ್ರಕರಣ ವಿಲೇವಾರಿ ಮಾಡಲು ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಲಾಗಿದೆ. ಇನ್‌ಸ್ಪೆಕ್ಟರ್‌ ಅವರು ಕಾನೂನಿನಂತೆ ಕೆಲಸ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಇಂತಹ ಒಟ್ಟು 61 ಪ್ರಕರಣಗಳ ಪೈಕಿ 5 ಪ್ರಕರಣಗಳ ವಿಲೇವಾರಿಗೆ ಕ್ರಮಕೈಗೊಂಡಿದ್ದಾರೆ. ಇದೊಂದೇ ಪ್ರಕರಣವಲ್ಲ. ಈ ಹಿಂದೆ ರೌಡಿಗಳಿಗೆ ಬುದ್ಧಿ ಕಲಿಸಿದ್ದು ಇದೇ ಇನ್‌ಸ್ಪೆಕ್ಟರ್‌. ಅವರು ಗಣಪತಿ ಆರಾಧನೆ ಮಾಡಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೀಗಿದ್ದೂ, ಬಿಜೆಪಿ ರಾಜಕೀಯಕ್ಕಾಗಿ ಈ ಪ್ರಕರಣವನ್ನು ಬೇರೆ ರೀತಿ ಬಿಂಬಿಸುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಶಹರ ಠಾಣೆ ಇನ್‌ಸ್ಪೆಕ್ಟರ್‌ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿಲ್ಲವೆಂದು ಕಮಿಷನರ್‌ ಹೇಳಿದ್ದಾರೆ. ವೈಯಕ್ತಿಕ ಕಾರಣಕ್ಕೆ ರಜೆ ಪಡೆದಿದ್ದಾರೆ. ಸರ್ಕಾರವೂ ಈ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.