ಹುಬ್ಬಳ್ಳಿ: ಇಲ್ಲಿನ ಉತ್ತರ ವಲಯದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟ ಅಧಿಕಾರಿಗಳೇ ತುಂಬಿದ್ದು, ಅವರನ್ನು ವರ್ಗಾವಣೆ ಮಾಡಬೇಕು ಎಂದು ಶಾಸಕ ಜಗದೀಶ ಶೆಟ್ಟರ್, ಕಂದಾಯ ಸಚಿವ ಆರ್. ಅಶೋಕ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
ಕಚೇರಿಗೆ ಗ್ರಾಮೀಣ ಪ್ರದೇಶಗಳಿಂದ ಮತ್ತು ದೂರದಿಂದ ಬರುವ ಜನರನ್ನು ವಿನಾಕಾರಣ ಉಪ ನೋಂದಣಾಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಆಸ್ತಿ ನೋಂದಣಿ ಕಾರ್ಯಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುವ ಕಚೇರಿಯಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಆದ್ದರಿಂದ ಉಪ ನೋಂದಣಾಧಿಕಾರಿಗಳಾದ ಸೌಮ್ಯಲತಾ ಮತ್ತು ಪ್ರತಿಭಾ ಬೀಡಿಕರ ಅವರನ್ನು ತುರ್ತಾಗಿ ವರ್ಗಾವಣೆ ಮಾಡಬೇಕು ಎಂದು ಕೋರಿದ್ದಾರೆ.
ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟ (ಕ್ರೆಡಾಯ್), ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಸಾರ್ವಜನಿಕರ ಗ್ರಾಹಕ ವೇದಿಕೆ, ವಕೀಲ ಸಂಘದ ಸದಸ್ಯರು, ವಾಸ್ತುಶಿಲ್ಪ ಸಂಘ, ಸಿವಿಲ್ ಎಂಜಿನಿಯರ್ಗಳ ಸಂಘ ಮತ್ತು ದಸ್ತಾವೇಜು ಬರಹಗಾರರ ಸಂಘದವರು ಇತ್ತೀಚೆಗೆ ಕಚೇರಿ ಎದುರು ಮಾಡಿದ ಪ್ರತಿಭಟನೆಯ ಅಂಶವನ್ನೂ ಅವರು ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.