ಧಾರವಾಡ: ಕೃಷಿ ಇಲಾಖೆಯಿಂದ ₹11ಕೋಟಿ ವೆಚ್ಚದಲ್ಲಿ ಖರೀದಿಸಿದ 64 ಸಂಚಾರಿ ಕೃಷಿ ಚಿಕಿತ್ಸಾಲಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ 2018–19, 2020–21, 2021–22ನೇ ಸಾಲಿನ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ‘ಇಷ್ಟು ವರ್ಷಗಳ ಕಾಲ ಯಾವುದೇ ಸರ್ಕಾರಗಳು ತಿರುಗಿ ನೋಡದೇ ಉಳಿದಿದ್ದ ರೈತ, ಕೂಲಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ. ಯಾವುದೇ ಯೋಜನೆಯ ಫಲಾನುಭವಿ ಗಳಾಗಿದ್ದರೂ ಅವರಿಗೆ ವಿದ್ಯಾನಿಧಿ ಸಿಗಲಿದೆ. ಹೀಗಾಗಿ 47 ಸಾವಿರ ರೈತ ಕೂಲಿಕಾರ್ಮಿಕರ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗಿದೆ. ಇದು ನನಗೆ ಹಂಡೆ ಹಾಲು ಕುಡಿದಷ್ಟು ಸಂತೋಷ ವನ್ನುಂಟು ಮಾಡಿದೆ’ ಎಂದರು.
‘ನಾನು ಮುಖ್ಯಮಂತ್ರಿ ಮಂತ್ರಿ ಸ್ಥಾನದಲ್ಲಿ ಇರುವವರೆಗೂ ರೈತರ ಪರವಾಗಿ ಕೆಲಸ ಮಾಡುತ್ತೇನೆ. ರೈತರ ಮಕ್ಕಳು ವಿದ್ಯಾಭ್ಯಾಸ ಮಾಡಲೆಂದೇ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದೆ. ಈ ಬಾರಿ ಬಜೆಟ್ನಲ್ಲೂ ಹಲವು ಕಾರ್ಯಕ್ರಮಗಳು ಸೇರಿಸುವ ಮೂಲಕ ರೈತ ಪರ ಬಜೆಟ್ ಮಂಡಿಸ ಲಾಗುವುದು’ ಎಂದರು.
ಸಾಲಮನ್ನಾ ಕೂಗು: ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿನ ನಡುವೆ ‘ಸಾಲಮನ್ನಾ’ ಹಾಗೂ ‘ಬೆಳೆ ವಿಮೆ’ ಮತ್ತು ಕೃಷಿ ಸಮ್ಮಾನದ ರಾಜ್ಯ ಸರ್ಕಾರದ ಭಾಗ ಬಾರದ ಕುರಿತು ರೈತರು ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಕಾರ್ಯಕ್ರಮದ ನಂತರ ರೈತರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ರೈತರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.