ADVERTISEMENT

ಧಾರವಾಡ : ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

ಎರಡು ವರ್ಷಗಳಿಂದ ನಿರೀಕ್ಷೆಗಿಂತ ಹೆಚ್ಚು ಸುರಿದ ಮಳೆರಾಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 19:31 IST
Last Updated 19 ಆಗಸ್ಟ್ 2020, 19:31 IST
ಧಾರಾಕಾರ ಮಳೆಯಿಂದಾಗಿ ಹುಬ್ಬಳ್ಳಿಯ ಉಣಕಲ್ ಕೆರೆ ತುಂಬಿ ಕೋಡಿ ಹರಿಯುತ್ತಿದೆಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಧಾರಾಕಾರ ಮಳೆಯಿಂದಾಗಿ ಹುಬ್ಬಳ್ಳಿಯ ಉಣಕಲ್ ಕೆರೆ ತುಂಬಿ ಕೋಡಿ ಹರಿಯುತ್ತಿದೆಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಜಿಲ್ಲೆಗೆ ಈ ಬಾರಿಯೂ ಮಳೆರಾಯನ ಕೃಪೆ ನಿರೀಕ್ಷೆಗಿಂತ ಹೆಚ್ಚಾಗಿಯೇ ಇದೆ. ಅದರಲ್ಲೂ ಆಗಸ್ಟ್‌ ನಲ್ಲಿ ವಾಡಿಕೆಗಿಂತ ಎರಡು ಪಟ್ಟು ಮಳೆ ಯಾಗಿದೆ. ಈ ತಿಂಗಳಲ್ಲಿ 508 ಮಿ.ಮೀ. ಆಗ ಬೇಕಿದ್ದ ಮಳೆ, 961.7 ಮಿ.ಮೀ. (ಆ. 18ರವರೆಗೆ) ಸುರಿ ದಿದೆ. 2019 ಆಗಸ್ಟ್‌ನಲ್ಲಿ 1757.6 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯ ಬೆಣ್ಣೆಹಳ್ಳ, ತುಪ್ಪರಿಹಳ್ಳ, ಡೌಗಿ ನಾಲಾ, ಕಲಘಟಗಿಯ ನೀರ ಸಾಗರ, ಧಾರವಾಡದ ಕೆಲಗೇರಿ, ಸಾಧನಕೇರಿ, ಹುಬ್ಬಳ್ಳಿಯ ಉಣಕಲ್ ಕೆರೆ, ಅಳ್ನಾವರದ ಇಂದಿರಮ್ಮನ ಕೆರೆ ಸೇರಿದಂತೆ ಜಿಲ್ಲೆಯ ಬಹುತೇಕ ಕೆರೆಗಳು ಈ ಬಾರಿಯೂ ಮೈದುಂಬಿ, ಕೋಡಿ ಹರಿದಿವೆ.

ಬರಗಾಲ ದಿಂದಾಗಿ 2015ರವರೆಗೆ ನೀರಿಲ್ಲದೆ ಸೊರಗಿದ್ದ ಹಳ್ಳಗಳು ಮತ್ತು ಕೆರೆಗಳು, 2019ರಿಂದ ಮಳೆಗೆ ತುಂಬಿ ಹರಿಯುತ್ತಿವೆ.

ADVERTISEMENT

ಅಬ್ಬರವಿಲ್ಲ: ‘ಈ ಸಲ ಮಳೆಯ ಅಬ್ಬರ ಅಷ್ಟಾಗಿ ಇಲ್ಲ. ಹಾಗಾಗಿ, ಹಾನಿ ಪ್ರಮಾಣವೂ ಕಡಿಮೆ ಇದೆ. ಕಳೆದ ವರ್ಷ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳಗಳು ಪ್ರವಾಹ ತಂದೊಡ್ಡಿದ್ದವು. ಬೆಳೆಗಳು ಜಲಾವೃತವಾಗಿ, ಗ್ರಾಮಗಳಿಗೂ ನೀರು ನುಗ್ಗಿ ಭಾರಿ ಹಾನಿ ಸಂಭವಿಸಿತ್ತು. ನೂರಾರು ಮನೆಗಳು ಕುಸಿದಿದ್ದವು’ ಎಂದು ಹುಬ್ಬಳ್ಳಿಯ ರೈತ ನಿಂಗಪ್ಪ ಜಕ್ಕಲಿ ನೆನಪಿಸಿಕೊಂಡರು.

‘ಮುಂಗಾರು ಬೆಳೆಗಳಾದ ಶೇಂಗಾ, ಅಲಸಂದಿ, ಸೋಯಾಬಿನ್, ಮೆಣಸಿ ನಕಾಯಿ ಪೈಕಿ ಸದ್ಯ ಹೆಸರು ಕಟಾವಿಗೆ ಬಂದಿದೆ. ಬಿಡದೆ ಸುರಿಯು ತ್ತಿರುವ ಮಳೆಯಿಂದಾಗಿ ಕಟಾವು ಕೆಲಸಕ್ಕೆ ಅಡಚಣೆಯಾಗಿದೆ. ಉಳಿದಂತೆ, ಕೃಷಿ ಚಟುವಟಿಕೆಗಳಿಗೆ ಮಳೆ ಪೂರಕವಾಗಿದೆ’ ಎಂದರು.

‘ಧಾರಾಕಾರ ಮಳೆ ಸುರಿದರೂ, ಈ ಭಾರಿ ಹಾನಿ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ ವಿಷಯ. ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಲು ಸನ್ನದ್ಧರಾಗಿದ್ದೇವೆ’ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಹೇಳಿದರು.

ತಾಲ್ಲೂಕುವಾರು ಮಳೆ ಪ್ರಮಾಣ (ಆ. 18ರವರೆಗೆ)

ತಾಲ್ಲೂಕು;ವಾಡಿಕೆ ಮಳೆ;ಸುರಿದ ಮಳೆ(ಮಿ.ಮೀ.ಗಳಲ್ಲಿ)

ಧಾರವಾಡ;113;279.2

ಹುಬ್ಬಳ್ಳಿ;86;197.1

ಕಲಘಟಗಿ;163;227.8

ಕುಂದಗೋಳ;82;153

ನವಲಗುಂದ;64;104.6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.