ಧಾರವಾಡ: ರಾಕೇಶ್ ಚೌರಾಸಿಯಾ ಅವರು ಕೊಳಲು ವಾದನದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಅವರ ಕೊಳಲು ವಾದನ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ನೇತ್ರ ತಜ್ಞ ಡಾ.ಎಂ.ಎಂ.ಜೋಶಿ ಹೇಳಿದರು.
ಭಾರತೀಯ ಸಂಗೀತ ವಿದ್ಯಾಲಯ ಮತ್ತು ದಾಸ ಟ್ರಸ್ಟ್ ಹಾಗೂ ಗಂಗೂಬಾಯಿ ಸಂಗೀತ ವಿದ್ಯಾಲಯದ ವತಿಯಿಂದ ಕರ್ನಾಟಕ ವಿದ್ಯಾಲಯದ (ಕೆಸಿಡಿ) ಸೃಜನಾ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂಗೀತ ಉತ್ಸವ ಹಾಗೂ ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಹರಿಪ್ರಸಾದ್ ಚೌರಸಿಯಾ, ರಾಕೇಶ್ ಚೌರಸಿಯಾ ಅವರ ಕೊಳಲು ವಾದನವನ್ನು ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಯೂ ಟ್ಯೂಬ್ನಲ್ಲಿ ಕೇಳುತ್ತೇನೆ. ರಾಕೇಶ್ ಅವರು ಕೊಳಲು ವಾದನದಲ್ಲಿ ಅಪಾರ ಪ್ರತಿಭೆ ಹೊಂದಿದ್ದಾರೆ ಎಂದು ಬಣ್ಣಿಸಿದರು.
ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸಂಗೀತವನ್ನು ಆಲಿಸಬೇಕು ಎಂದು ಹೇಳಿದರು.
ರಾಕೇಶ್ ಚೌರಾಸಿಯಾ ಮಾತನಾಡಿ, ‘ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ ನನಗೆ ಸಂದಿದ್ದು ಸಂತೋಷವಾಗಿದೆ’ ಎಂದು ಹೇಳಿದರು.
ಕೊಲ್ಕತ್ತದ ರೋಸಿ ದತ್ತಾ ಅವರು ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಶ್ರೀಧರ್ ಮಾಂಡ್ರೆ ಅವರು ತಬಲಾ ಹಾಗೂ ಗುರುಪ್ರಸಾದ್ ಹೆಗಡೆ ಅವರು ಹಾರ್ಮೊನಿಯಂ ಸಾಥ್ ಸಂಗತ್ ನೀಡಿದರು.
ರಾಕೇಶ್ ಚೌರಾಸಿಯ ಅವರು ಕೊಳಲು ವಾದನ ಪ್ರಸ್ತುತಪಡಿಸಿದರು. ಓಜಸ್ ಅಧಿಯಾ ಅವರು ತಬಲಾ ಸಾಥ್ ಸಂಗತ್ ನೀಡಿದರು.
ಭಾರತೀಯ ಸಂಗೀತ ವಿದ್ಯಾಲಯದ ವಿನಯ್ ನಾಯಕ್, ಸಂಗೀತ ಕಲಾವಿದ ಶಫಿಕ್ ಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.