ADVERTISEMENT

ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 17:05 IST
Last Updated 7 ಡಿಸೆಂಬರ್ 2018, 17:05 IST
ಭಾವಸಾರ ಮಂಗಲ ಕಾರ್ಯಾಲಯದಲ್ಲಿ ಗುರುವಾರದಿಂದ ಆರಂಭವಾದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ.ಸತೀಶ ಮೈಸೂರು ಸಿಲ್ಕನ್ನು ವೀಕ್ಷಿಸಿದರು
ಭಾವಸಾರ ಮಂಗಲ ಕಾರ್ಯಾಲಯದಲ್ಲಿ ಗುರುವಾರದಿಂದ ಆರಂಭವಾದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ.ಸತೀಶ ಮೈಸೂರು ಸಿಲ್ಕನ್ನು ವೀಕ್ಷಿಸಿದರು   

ಧಾರವಾಡ: ‘ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಪಾರಂಪರಿಕ ಉತ್ಪನ್ನ, ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಅವುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿರುವುದು ಸಂತಸದ ಸಂಗತಿ. ಗುಣಮಟ್ಟ ಮತ್ತು ಮೌಲ್ಯಕ್ಕೆ ಖಾತ್ರಿ ಇರುವ ಈ ಉತ್ಪನ್ನಗಳನ್ನು ಜನರು ಪ್ರೋತ್ಸಾಹಿಸಬೇಕು’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಇಲ್ಲಿನ ಹಳೆ ಡಿಎಸ್‌ಪಿ ಕಚೇರಿ ಎದುರಿನ ಭಾವಸಾರ ಮಂಗಲ ಕಚೇರಿಯಲ್ಲಿ ಗುರುವಾರದಿಂದ ಆರಂಭವಾದ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಗಿಂತ ಮೈಸೂರ್ ಸಿಲ್ಕ್ ವಿಭಿನ್ನವಾಗಿದೆ. ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆ ಬಟ್ಟೆಯಿಂದ ಸಿದ್ಧಗೊಂಡಿದೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಭೌಗೋಳಿಕ ಸುವಾಸನೆ ನೀಡುತ್ತದೆ’ ಎಂದರು.

ADVERTISEMENT

ಸಂಸ್ಥೆ ವ್ಯವಸ್ಥಾಪಕ ಭಾನುಪ್ರಕಾಶ ಮಾತನಾಡಿ, ‘ಕೆ.ಎಸ್.ಐ.ಸಿ.ಯ ಮೈಸೂರ್ ಸಿಲ್ಕ್ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿಜಾಗತಿಕ ಮಾನ್ಯತೆ ಪಡೆದಿದೆ. ಇದು ಸರಕು ಭೌಗೋಳಿಕ ಗುರುತಿನ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ 1999ರಲ್ಲಿ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಕೆ.ಎಸ್.ಐ.ಸಿ ನಿಗಮಕ್ಕೆ 2016-17ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ಸಾರ್ವಜನಿಕ ಉದ್ದಿಮೆಗಳಿಗೆ ಪ್ರದಾನ ಮಾಡಲಾಗುವ ಮುಖ್ಯಮಂತ್ರಿ ಅವರಿಂದ ವಾರ್ಷಿಕ ರತ್ನ ಪ್ರಶಸ್ತಿ ಲಭಿಸಿದೆ’ ಎಂದರು.

ಡಿ.11ರ ವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ಆರು ದಿನ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಬಿ.ಸಿ.ಸತೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.