ADVERTISEMENT

ಹುಬ್ಬಳ್ಳಿ: ಹೆಸರು ಬದಲಾವಣೆ ಆರೋಪ; ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 6:02 IST
Last Updated 1 ಮೇ 2022, 6:02 IST
ಹುಬ್ಬಳ್ಳಿ ಮಹತ್ಮಾಗಾಂಧಿ ಉದ್ಯಾನದ ಎದುರು ಶನಿವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿ ಮಹತ್ಮಾಗಾಂಧಿ ಉದ್ಯಾನದ ಎದುರು ಶನಿವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಮಹಾತ್ಮಾ ಗಾಂಧಿ ಉದ್ಯಾನದಲ್ಲಿರುವ ಇಂದಿರಾ ಗಾಜಿನ ಮನೆಯ ಹೆಸರನ್ನು ಹುಬ್ಬಳ್ಳಿ ಗಾಜಿನ ಮನೆ ಎಂದು ಹೆಸರಿಸಲು ಚರ್ಚೆ ನಡೆದಿದ್ದು, ಸ್ಮಾರ್ಟ್‌ ಸಿಟಿ ಕಾಮಗಾರಿ ಯೋಜನೆ ಉದ್ಘಾಟನೆಯ ಆಮಂತ್ರಣ ಪತ್ರದಲ್ಲೂ ‘ಇಂದಿರಾ’ ಹೆಸರು ನಮೂದಿಸಿರಲಿಲ್ಲ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ನಗರದಲ್ಲಿ ಅಸಮಧಾನ ವ್ಯಕ್ತಪಡಿಸಿದರು.

ಮಹಾತ್ಮಾಗಾಂಧಿ ಉದ್ಯಾನದ ಎದುರು ಸೇರಿದ ಅವರು, ಅನೇಕ ವರ್ಷಗಳಿಂದ ಇಂದಿರಾಗಾಂಧಿ ಗಾಜಿನ ಮನೆ ಎಂದೇ ಹೆಸರಿಸಿ ಕರೆಯಲಾಗುತ್ತಿದೆ. ಆದರೆ, ಇದೀಗ ಹೆಸರು ಬದಲಿಸಿ ಹುಬ್ಬಳ್ಳಿ ಗಾಜಿನ ಮನೆ ಎಂದು ನಾಮಕರಣ ಮಾಡಲು ಹುನ್ನಾರ ನಡೆಸಿದಂತಿದೆ. ಈಗಾಗಲೇ ಬಿಜೆಪಿ ರಾಷ್ಟ್ರಮಟ್ಟದಲ್ಲಿನ ಅನೇಕ ಯೋಜನೆಗಳ ಹೆಸರನ್ನು ಬದಲಿಸಿದೆ. ಯಾವುದೇ ಕಾರಣಕ್ಕೂ ಇಂದಿರಾ ಗಾಜಿನ ಮನೆ ಹೆಸರು ಬದಲಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

‘ಕಾಮಗಾರಿ ವೆಚ್ಚದ ಪಟ್ಟಿಯಲ್ಲಿ ಕಣ್ತಪ್ಪಿನಿಂದಾಗಿ ಇಂದಿರಾ ಹೆಸರು ನಮೂದಾಗಿರಲಿಲ್ಲ. ಗಾಜಿನ ಮನೆ ಹೆಸರು ಬದಲಿಸುವಂತೆ ಯಾರ ಒತ್ತಡವೂ ಇಲ್ಲ’ ಎಂದು ಪ್ರತಿಭಟನಾಕಾರರಿಗೆ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ತಿಳಿಸಿದರು.

ADVERTISEMENT

ಹುಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ದಶರಥ ವಾಲಿ, ಮೋಹನ ಹಿರೇಮನಿ, ದೀಪಾ ಗೌರಿ, ಸ್ಮೀತಾ ಗಬ್ಬೂರ, ಸುವರ್ಣಾ ಕಲಕುಂಟ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.