ADVERTISEMENT

ಕಾಮಣ್ಣನ ದರ್ಶನಕ್ಕೆ ಹರಿದುಬಂದ ಜನಸಾಗರ

ಹಗಲಿರುಳು ದರ್ಶನ: ಪೊಲೀಸರಿಂದ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:14 IST
Last Updated 1 ಮಾರ್ಚ್ 2026, 4:14 IST

ನವಲಗುಂದ: ಶ್ರದ್ಧಾ, ಭಕ್ತಿಯ ಆಚರಣೆಗೆ ಪ್ರಸಿದ್ದಿಯಾದ ಇಲ್ಲಿನ ರಾಮಲಿಂಗ ಕಾಮದೇವರ ದರ್ಶನ ಶನಿವಾರದಿಂದ ಆರಂಭಗೊಂಡಿದ್ದು, ಮೊದಲ ದಿನದಂದು ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆಯುವ ಮೂಲಕ ಹೋಳಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.

ಕಲಿಯುಗದ ಕಾಮಧೇನು ಎಂಬ ಖ್ಯಾತಿ ಪಡೆದ ರಾಮಲಿಂಗ ಕಾಮದೇವರ ಕುರಿತಾಗಿ ಹಲವಾರು ಶತಮಾನಗಳ ಇತಿಹಾಸವಿದ್ದು, ಹರಕೆ ಹೊತ್ತ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಲ್ಪವೃಕ್ಷವಾಗಿದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅಂತಲೇ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

ಭಕ್ತರು ತಮ್ಮ ಬೇಡಿಕೆ ಪೂರೈಕೆಗಾಗಿ ಕಂಕಣ ಭಾಗ್ಯಕ್ಕಾಗಿ ಬೆಳ್ಳಿ ಬಾಸಿಂಗ, ಮಕ್ಕಳ ಭಾಗ್ಯಕ್ಕಾಗಿ ಬೆಳ್ಳಿ ತೊಟ್ಟಿಲು. ಆರೋಗ್ಯ ಭಾಗ್ಯಕ್ಕಾಗಿ ಬೆಳ್ಳಿ ಕುದುರೆ. ವಿದ್ಯಾಭ್ಯಾಸ ಹಾಗೂ ಅಭಿವೃದ್ಧಿಗಾಗಿ ಬೆಳ್ಳಿ ಪಾದುಕೆ ಅಥವಾ ಬೆಳ್ಳಿ ಬೆತ್ತಗಳನ್ನು ಪಡೆಯುವುದು ವಾಡಿಕೆ. ತಮ್ಮ ಮನೋಭಿಲಾಷೆ ಈಡೇರಿಕೆಗಾಗಿ ಇಲ್ಲಿಂದ ಹರಕೆ ರೂಪದಲ್ಲಿ ಪಡೆದ ಬೆಳ್ಳಿ ಪರಿಕರಗಳಿಗೆ ಪ್ರತಿಯಾಗಿ ಹರಕೆ ಈಡೇರಿದ ಬಳಿಕ ಮತ್ತೊಂದನ್ನು ಹರಕೆ ರೂಪದಲ್ಲಿ ಸಲ್ಲಿಸಿ ಕೃತಜ್ಞರಾಗುತ್ತಾ, ಅಷ್ಟೆ ಅಲ್ಲ ಹಲವಾರು ಭಕ್ತರು ತಲಾಭಾರ ಹರಕೆಯನ್ನೂ ಪೂರೈಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.

ADVERTISEMENT

ಸೂಕ್ತ ವ್ಯವಸ್ಥೆ: ವರ್ಷದಿಂದ ವರ್ಷಕ್ಕೆ ಭಕ್ತರ ದಂಡು ಹೆಚ್ಚುತ್ತಿರುವುದರಿಂದ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್‌ನವರು ಭಕ್ತರ ಅನುಕೂಲಕ್ಕಾಗಿ ಒಂದು ವಾರ ಮೊದಲೇ ಮೂಲ ಸೌಕರ್ಯಗಳ ಸಿದ್ಧತೆ ಮಾಡಿಕೊಳ್ಳುವ ಮೂಲಕ ಬಿಸಿಲಲ್ಲಿ ದಣಿದು ಬರುವ ಭಕ್ತ ಸಮೂಹಕ್ಕೆ ತಂಪು ಪಾನೀಯ, 24X7 ಪ್ರಸಾದ ಸೇವೆಯನ್ನು ವ್ಯವಸ್ಥಿತವಾಗಿ ಮಾಡಿ ಭಕ್ತರಿಗೆ ಅನುಕೂಲ ಕಲ್ಪಿಸುತ್ತಾರೆ. ಜತೆಗೆ ಪೊಲೀಸ್ ಇಲಾಖೆಯೂ ಸೂಕ್ತ ಬಂದೋಬಸ್ತ್ ವ್ಯವಸ್ಥೆಕೈಗೊಂಡಿದೆ. 24 ಗಂಟೆಗಳ ಕಾಲ ಭಕ್ತರ ದಂಡು ನಿರಂತರ ಸರತಿಯಲ್ಲಿ ನಿಂತು ದರ್ಶನ ಪಡೆಯುವುದು ವಿಶೇಷ. ಮಾರ್ಚ್ 4 ರವರೆಗೆ 7 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುವ ಅಂದಾಜಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.