ADVERTISEMENT

ನೇಹಾ ಪ್ರಕರಣ: NSUIನಿಂದ ಪ್ರತಿಭಟನೆ

ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 16:27 IST
Last Updated 24 ಏಪ್ರಿಲ್ 2024, 16:27 IST
ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜು ಎದುರು ಬುಧವಾರ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು                    –ಪ್ರಜಾವಣಿ ಚಿತ್ರ
ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜು ಎದುರು ಬುಧವಾರ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು                    –ಪ್ರಜಾವಣಿ ಚಿತ್ರ   

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ಬುಧವಾರವೂ ನಗರದಲ್ಲಿ ಪ್ರತಿಭಟನೆಗಳು ನಡೆದವು. ನೇಹಾಳ ಆತ್ಮಕ್ಕೆ ಶಾಂತಿಕೋರಿ ಮೇಣದ ಬತ್ತಿ ಹಚ್ಚಿ ಕೆಲವರು ಶ್ರದ್ಧಾಂಜಲಿ ಸಲ್ಲಿಸಿದರು.

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ವತಿಯಿಂದ ವಿದ್ಯಾರ್ಥಿಗಳು ನಗರದ ಬಿವಿಬಿ ಕಾಲೇಜು ಎದುರು ಪ್ರತಿಭಟನೆ ನಡೆಸಿದರು. ಬಿಆರ್‌ಟಿಎಸ್ ಕಾರಿಡಾರಿನಲ್ಲಿ ಚಿಗರಿ ಬಸ್‌ಗಳ ಸಂಚಾರ ಹಾಗೂ ಹುಬ್ಬಳ್ಳಿ-ಧಾರವಾಡ ನಡುವಿನ ವಾಹನಗಳ‌ ಸಂಚಾರ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎನ್‌ಎಸ್‌ಯುಐ ಬಾವುಟ ಹಾಗೂ ನೇಹಾ ಸಾವಿಗೆ ನ್ಯಾಯ ಬೇಕು ಎನ್ನುವ ಫಲಕಗಳನ್ನು ಪ್ರದರ್ಶಿಸಿ, ಘೋಷಣೆ ಕೂಗಿದರು. ‘ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲೇಬೇಕು. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಡಿಸಿಪಿ ರಾಜೀವ್ ಎಂ. ಅವರಿಗೆ ಮನವಿ ಪತ್ರ ಸಲ್ಲಿಸಿ, ‘ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ರೋಹಿತ್ ಘೋಡಕೆ, ರಫೀಕ್ ಅಲಿ, ರೋಹನ್ ಹಿಪ್ಪರಗಿ, ವಿನಯ ಪಟ್ಟಣಶೆಟ್ಟಿ, ರಾಹುಲ್ ಬೆಳದಡಿ, ಬಸನಗೌಡ ಪಾಟೀಲ, ವಿಶಾಲ ಮಾನೆ, ಕಿರಣ ಗಾಂಧಾಳ, ಕಲ್ಮೇಶ ಉಳ್ಳಾಗಡ್ಡಿ, ನಿಖಿಲ್ ಹಿರೇಮಠ, ಕಿಶೋರ ಸಿರಸಂಗಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಹಿ ಸಂಗ್ರಹ ಅಭಿಯಾನ: ‘ನೇಹಾ ಕೊಲೆ ಪ್ರಕರಣ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕೆಂದರೆ, ಅದನ್ನು ಸಿಐಡಿಯಿಂದ ಸಿಬಿಐಗೆ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿ ಶ್ರೀ ಗಜಾನನ ಮಹಾಮಂಡಳದ ಸದಸ್ಯರು ನಗರದ ದುರ್ಗದ ಬೈಲ್‌ನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.

ಮಹಾಮಂಡಳದ ಅಧ್ಯಕ್ಷ ಡಿ. ಗೋವಿಂದರಾವ್ ನೇತೃತ್ವದಲ್ಲಿ ಹಾಗೂ ಅಕ್ಕಿಹೊಂಡದ ಚಂದ್ರಶೇಖರ ಸ್ವಾಮೀಜಿ ಸಮ್ಮುಖದಲ್ಲಿ ಸಂವಿಧಾನ ಸುರಕ್ಷತಾ ಸಮಿತಿ ಸದಸ್ಯರು ಸಹ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗುವ ಭರವಸೆಯಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದರೆ ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.

‘ಕೆಲವರು ಪ್ರತಿಭಟನೆ ನಡೆಸಿ ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ. ನೇಹಾಳನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ. ತಪ್ಪಿತಸ್ಥ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಡಿ. ಗೋವಿಂದರಾವ್‌ ಆಗ್ರಹಿಸಿದರು‌.

ಅನ್ವರ್ ಮುಧೋಳ, ಅಶ್ರಫ್ ಅಲಿ, ಬಶೀರ್ ಅಹ್ಮದ್, ಗಜಾನನ ಎರಕಲ್, ಮುತ್ತಣ್ಣ ಶಿವಳ್ಳಿ ಮಜಹರ್ ಖಾನ್, ಹನುಮಂತ ಬಂಕಾಪುರ, ಅಬ್ದುಲ್ ವಹಾಬ್‌ಮುಲ್ಲಾ, ಲಿಂಗಪ್ಪ ಮೊರಬದ, ಬಾಬಾಜಾನ್ ಮುಧೋಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.‌

ಸಾಂತ್ವನ: ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ)  ನಿಯೋಗದ ಸದಸ್ಯರು ನೇಹಾ ಹಿರೇಮಠ ನಿವಾಸಕ್ಕೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ, ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ, ಬಿ.ಎಸ್. ಸೊಪ್ಪಿನ್, ಬಿ.ಎನ್ ಪೂಜಾರ್, ಎ.ಎಂ. ಖಾನ್, ಬಿ.ಐ. ಇಳಿಗೇರ, ವಕೀಲ ಬಿ.ವಿ. ಕೋರಿಮಠ‌, ಹುಸೇನಸಾಬ್ ನದಾಫ್‌, ಮಹ್ಮದ್‌ರಫೀಕ್ ಮುಳುಗುಂದ ಇದ್ದರು.

ಹುಬ್ಬಳ್ಳಿಯ ದುರ್ಗದಬೈಲ್‌ ವೃತ್ತದಲ್ಲಿ  ಬುಧವಾರ ಗಜಾನನ ಮಹಾಮಂಡಳದ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಹುಬ್ಬಳ್ಳಿಯ ಬಿಡ್ನಾಳದಲ್ಲಿ ಇರುವ ನೇಹಾ ನಿವಾಸಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್‌ ಸುರ್ಜೇವಾಲಾ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.