ಹುಬ್ಬಳ್ಳಿ: ಗ್ರಾಮ ಪಂಚಾಯ್ತಿ ನೌಕರರ ವೇತನಕ್ಕೆ ಕಡಿಮೆ ಬೀಳುತ್ತಿದ್ದ ಹಣವನ್ನು ನೀಡುವಂತೆ ಎರಡು ವರ್ಷಗಳಿಂದ ಮಾಡುತ್ತಿದ್ದ ಹೋರಾಟಕ್ಕೆ ಈಗ ಫಲ ಲಭಿಸಿದ್ದು, ವೇತನ ಪಾವತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಅಧ್ಯಕ್ಷ ವಿ.ಪಿ. ಕುಲಕರ್ಣಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗ್ರಾಮ ಪಂಚಾಯ್ತಿಯ ವಿವಿಧ ಶ್ರೇಣಿಯ ನೌಕರರಿಗೆ ವೇತನ ನೀಡಲು ರಾಜ್ಯ ಸರ್ಕಾರ 2018ರ ಜನವರಿಯಲ್ಲಿ ಆದೇಶಿಸಿತ್ತು. ಆದರೆ, ಇದಕ್ಕೆ ಬೇಕಾಗಿದ್ದ ₹900 ಕೋಟಿಯಲ್ಲಿ ₹518 ಕೋಟಿಯನ್ನಷ್ಟೇ ಬಿಡುಗಡೆ ಮಾಡಿತ್ತು. ಉಳಿದ ₹382 ಕೋಟಿ ಬಿಡುಗಡೆ ಮಾಡುವಂತೆ ನಿರಂತರವಾಗಿ ಹೋರಾಟಗಳನ್ನು ಮಾಡಲಾಗಿತ್ತು. ಸರ್ಕಾರ ಈಗ ₹250 ಕೋಟಿ ವಿಶೇಷ ಅನುದಾನ ಬಿಡುಗಡೆಗೆ ಅಧಿಸೂಚನೆ ಹೊರಡಿಸಿದೆ. ಉಳಿದ ಹಣವನ್ನು ಬೇರೆ, ಬೇರೆ ಯೋಜನೆಗಳಿಗೆ ಮೀಸಲಿಟ್ಟ ಹಣ ನೀಡಲು ಮುಂದಾಗಿದೆ. ಇದರಿಂದ 6,300 ನೌಕರರಿಗೆ ಅನುಕೂಲವಾಗಲಿದೆ’ ಎಂದರು.
‘ಈ ಹಣ ಬಿಡುಗಡೆ ಮಾಡುವಂತೆ ಸಂಘದ ಅಧ್ಯಕ್ಷ ದಿವಂಗತ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಅನೇಕ ಬಾರಿ ಹೋರಾಟಗಳನ್ನು ಮಾಡಲಾಗಿತ್ತು. ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಮತ್ತು ಬೆಂಗಳೂರಿನಲ್ಲಿ ಅನೇಕ ಧರಣಿಗಳನ್ನು ನಡೆಸಲಾಗಿತ್ತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.