ಹುಬ್ಬಳ್ಳಿ: ‘ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ನರೇಗಾ ಯೋಜನೆ ಜಾರಿಗೆ ತರದಿದ್ದರೆ ಗ್ರಾಮ ಪಂಚಾಯ್ತಿಗಳಿಗೆ ಜೀವವೇ ಇರುತ್ತಿರಲಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ಭಾನುವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನರೇಗಾ ಯೋಜನೆ ಕಾಂಗ್ರೆಸ್ನ ಅತಿ ದೊಡ್ಡ ಸಾಧನೆ. ಈ ಯೋಜನೆ ಮುಖಾಂತರ ಪಂಚಾಯ್ತಿಗಳಿಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದೆ. ಗ್ರಾಮಗಳ ಅಭಿವೃದ್ಧಿಗೆ ಇದು ಪೂರಕವಾಗಿದೆ. ಇದರಿಂದಲೇ ಪಂಚಾಯ್ತಿಗಳಿಗೆ ಶಕ್ತಿ ಬಂದಿದೆ ಎಂದು ಪಂಚಾಯ್ತಿ ಸದಸ್ಯರು ಅರ್ಥ ಮಾಡಿಕೊಂಡಿದ್ದಾರೆ’ ಎಂದರು.
‘ವಿವಿಧ ಯೋಜನೆಗಳ ಮೂಲಕ ಪಂಚಾಯ್ತಿಗಳಿಗೆ ಅನುದಾನ, ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ನೀಡಿದೆ. ಬಿಜೆಪಿಯ ಆಡಳಿತದಿಂದ ಪ್ರತಿಯೊಬ್ಬರೂ ಬೇಸತ್ತಿದ್ದು, ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ’ ಎಂದು ಹೇಳಿದರು.
ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಕುರಿತು ಪ್ರತಿಕ್ರಿಯಸಿದ ಅವರು, ‘ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳುತ್ತಿದ್ದರು. ಈಗ ಏನೆನ್ನುತ್ತಾರೆ ನೋಡೋಣ. ಅವರ ಶಿಸ್ತು ಈಗೆಲ್ಲಿ ಹೋಯಿತು ಎನ್ನುವ ಪ್ರಶ್ನೆಗೆ ಉತ್ತರಿಸಲಿ’ ಎಂದರು.
‘ಹಿಂದುಳಿದವರ ಅಭಿವೃದ್ಧಿಗೆ ಕಾಂಗ್ರೆಸ್ ಏನು ಮಾಡಿದೆ ಎನ್ನುವ ಕುರಿತು ಸಚಿವ ಕೆ.ಎಸ್. ಈಶ್ವರಪ್ಪರ ಬಹಿರಂಗ ಚರ್ಚೆಯ ಆಹ್ವಾನಕ್ಕೆ ನಾನು ಸಿದ್ಧನಿದ್ದೇನೆ. ಜಾಗ, ಸಮಯ ಅವರೇ ನಿಗದಿಪಡಿಸಲಿ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.