ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಸುತ್ತಿರುವುದಕ್ಕೆ ಹಾಗೂ ಪರೀಕ್ಷೆಗಳ ಬಗೆಗೆ ಗೊಂದಲದ ಹೇಳಿಕೆ ನೀಡುತ್ತಿರುವ ಉನ್ನತ ಶಿಕ್ಷಣ ಸಚಿವರ ವಿರುದ್ಧ ಎನ್ಎಸ್ಯುಐ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ನಡೆಸುತ್ತಿರುವುದು ಸರಿಯಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲ. ನೆಟ್ವರ್ಕ್ ಇದ್ದರೂ ಮನೆಯಲ್ಲಿ ಒಂದೇ ಆ್ಯಡ್ರಾಯ್ಡ್ ಫೋನ್ ಇರುತ್ತದೆ. ಅದನ್ನು ಪೋಷಕರೂ ಬಳಸಬೇಕು. ವಿದ್ಯಾರ್ಥಿಗಳೂ ಬಳಸಬೇಕಾಗುತ್ತಿದೆ. ಹೀಗಾಗಿ ಸರಿಯಾಗಿ ಅಧ್ಯಯನ ಮಾಡಲು ಆಗುತ್ತಿಲ್ಲ ಎಂದು ದೂರಿದರು.
ಪದವಿ ಪರೀಕ್ಷೆಗಳ ಆಯೋಜನೆ ಬಗ್ಗೆಯೂ ಸಚಿವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪರೀಕ್ಷೆ ರದ್ದುಗೊಳಿಸಬೇಕು. ಹಿಂದಿನ ಫಲಿತಾಂಶದ ಆಧಾರದ ಮೇಲೆ ಈಗಿನ ಫಲಿತಾಂಶ ಘೋಷಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ರಜತ್ ಉಳ್ಳಾಗಡ್ಡಿಮಠ, ಶಿವು ಬೆಂಡಿಗೇರಿ, ಸುನಿಲ ಮರಾಠೆ, ರೋಹಿತ್ ಘೋಡಕೆ, ಅಬ್ದುಲ್ ಸಾವಂತನವರ, ವಿನಯ ಜಕನೂರ, ಲಕ್ಷ್ಮಣ ಗಡ್ಡಿ ಇದ್ದರು. ನಗರದ ವಿವಿಧ ಎಂಜಿನಿಯರ್ ಕಾಲೇಜು, ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.