ಹುಬ್ಬಳ್ಳಿ: ಅತಿವೃಷ್ಟಿಯಿಂದ ಹೆಸರು, ಉದ್ದು ಬೆಳೆ ಹಾನಿ ಅನುಭವಿಸಿದ್ದ ರೈತರಿಗೆ ಈಗ ಈರುಳ್ಳಿ ಬೆಲೆ ಕುಸಿತವು ಹೈರಾಣ ಆಗಿಸಿದೆ. ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಸುವವರೇ ಇಲ್ಲದಂತಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಈ ವರ್ಷ 6,300 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಆದರೆ, ನಿರಂತರ ಮಳೆ ಮತ್ತು ಇಬ್ಬನಿ ಪರಿಣಾಮ ಶೇ 50ಕ್ಕೂ ಹೆಚ್ಚು ಬೆಳೆ ಹಾನಿಯಾಗಿದೆ. ಬೆಳೆಯ ಗುಣಮಟ್ಟ ಕೊರತೆಯಿಂದ ಬೆಲೆ ಕುಸಿದಿದೆ.
‘ಈರುಳ್ಳಿ ಬೆಳೆಯು ಮಜ್ಜಿಗೆ ರೋಗ, ಟ್ವಿಸ್ಟರ್ ರೋಗ ಹಾಗೂ ಕೊಳೆ ರೋಗದಿಂದ ಹಾಳಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ರೈತರು ಈರುಳ್ಳಿ ಬಿತ್ತನೆ, ಕಟಾವಿಗೆ ಮಾಡಿದ ಖರ್ಚು ಸಹ ಬಾರದೇ ನಷ್ಟವಾಗಿದೆ’ ಎಂದು ರೈತರು ತಿಳಿಸಿದರು.
‘ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ, ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನಲ್ಲಿ ಹೆಚ್ಚು ಈರುಳ್ಳಿ ಬೆಳೆ ಪ್ರದೇಶವಿದೆ. ಇಲ್ಲಿಯೇ ಬೆಳೆ ಹಾನಿ ಆಗಿದೆ. ಅಳಿದುಳಿದ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತಂದರೆ ಅದಕ್ಕೆ ಬೆಲೆಯೂ ಸಿಗುತ್ತಿಲ್ಲ. ಆದರೆ, ರೈತರಿಂದ ಖರೀದಿಸಿದ ಸಗಟು ವ್ಯಾಪಾರಿಗಳು, ವರ್ತಕರು, ದಲ್ಲಾಳಿಗಳು ಚಿಲ್ಲಾರಿ ವ್ಯಾಪಾರಿಗಳಿಗೆ ಉತ್ತಮ ಬೆಲೆಗೆ ಮಾರುತ್ತಿದ್ದಾರೆ’ ಎಂದರು.
ಪುಣೆಯ ಈರುಳ್ಳಿಗೆ ಬೆಲೆ: ‘ಎಪಿಎಂಸಿ ಮಾರುಕಟ್ಟೆಗೆ ಧಾರವಾಡ, ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯಿಂದ ಈರುಳ್ಳಿ ಬರುತ್ತದೆ. ಈ ಬಾರಿ ಸ್ಥಳೀಯ ಈರುಳ್ಳಿಗೆ ಗುಣಮಟ್ಟದ ಕೊರತೆಯಿಂದ ಬೆಳೆಗಾರರಿಗೆ ಉತ್ತಮ ಧಾರಣೆ ಸಿಗುತ್ತಿಲ್ಲ. ಆದರೆ, ಮಹಾರಾಷ್ಟ್ರದ ಪುಣೆಯ ಈರುಳ್ಳಿ ಗುಣಮಟ್ಟದ ಕಾರಣ, ಉತ್ತಮ ಬೆಲೆಯಿದೆ’ ಎನ್ನುತ್ತಾರೆ ಇಲ್ಲಿನ ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು.
‘ಸೆ.25ರಂದು 2,659 ಕ್ವಿಂಟಲ್ ಸ್ಥಳೀಯ ಈರುಳ್ಳಿ. 1,444 ಕ್ವಿಂಟಾಲ್ ಪುಣೆಯ ಈರುಳ್ಳಿ ಎಪಿಎಂಸಿಗೆ ಆವಕವಾಗಿತ್ತು. ಸ್ಥಳೀಯ ಈರುಳ್ಳಿಯು ಕ್ವಿಂಟಾಲ್ಗೆ ₹500ರಿಂದ ₹1,350ರ ತನಕ ಮಾರಾಟವಾಯಿತು. ಪುಣೆಯ ಈರುಳ್ಳಿಯು ಕ್ವಿಂಟಾಲ್ ₹800ರಿಂದ 1,900ರ ತನಕ ಖರೀದಿಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ₹3 ಸಾವಿರದಿಂದ ₹4 ಸಾವಿರದ ತನಕ ಮಾರಾಟವಾಗಿತ್ತು’ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.
‘ಇಲ್ಲಿನ ಎಪಿಎಂಸಿಯಿಂದ ಮಹಾರಾಷ್ಟ್ರ, ಪಶ್ಚಿಮಬಂಗಾಳ, ದೆಹಲಿ, ಶ್ರೀನಗರ, ಹೈದರಾಬಾದ್, ತಮಿಳುನಾಡಿಗೂ ಈರುಳ್ಳಿಯನ್ನು ಕಳುಹಿಸಲಾಗುತ್ತಿತ್ತು. ಆದರೆ, ಅಲ್ಲಿಯೇ ಈ ಬಾರಿ ಉತ್ತಮ ಇಳುವರಿ ಬಂದಿದೆ’ ಎನ್ನುತ್ತಾರೆ ಅವರು.
‘ಒಂದೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆ. ಇದಕ್ಕಾಗಿ ₹70 ಸಾವಿರ ಖರ್ಚಾಗಿತ್ತು. ಮಳೆಯಿಂದಾಗಿ ಹಾಳಾಗಿ 58 ಪಾಕೇಟ್ ಮಾತ್ರ ಈರುಳ್ಳಿ ಬಂದಿತ್ತು. ₹25 ಸಾವಿರಕ್ಕೆ ಮಾರಾಟವಾಗಿದೆ. ಬಿತ್ತನೆ ಹಾಗೂ ಕಟಾವಿಗೆ ಮಾಡಿದ ಖರ್ಚೂ ಸಹ ಬಂದಿಲ್ಲ’ ಎಂದು ಇಲ್ಲಿನ ಎಪಿಎಂಸಿಯಲ್ಲಿ ಈರುಳ್ಳಿ ಮಾರಾಟ ಮಾಡಲು ಬಂದಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ರೈತ ಸಿದ್ದಲಿಂಗಪ್ಪ ಬೇಸರದಿಂದ ಹೇಳಿದರು.
ವಿಜಯಪುರ, ಬಾಗಲಕೋಟೆ ಜಿಲ್ಲೆಯಿಂದಲೂ ಈರುಳ್ಳಿ ಮಾರಲು ಬಂದ್ದಿದ್ದ ರೈತರ ಹೇಳಿಕೆಯೂ ಇದಕ್ಕೆ ಹೊರತಾಗಿರಲಿಲ್ಲ. ಒಮ್ಮೆ ಅತಿವೃಷ್ಟಿ, ಮತ್ತೊಮ್ಮೆ ಅನಾವೃಷ್ಟಿ ಉಂಟಾಗಿ ಬೆಳೆಗಳು ಹಾಳಾದರೆ, ನಮ್ಮ ಸ್ಥಿತಿ ಕೇಳುವವರು ಯಾರು ಎಂದು ಪ್ರಶ್ನಿಸುತ್ತಾರೆ‘ ಅವರು.
ಈರುಳ್ಳಿ ಬೆಳೆಯಲು ₹50 ಸಾವಿರ ಖರ್ಚಾಗಿತ್ತು. ಕೇವಲ ₹13 ಸಾವಿರಕ್ಕೆ ಮಾರಾಟವಾಗಿದೆ. ಬಿತ್ತನೆ ಕಟಾವಿಗೆ ಖರ್ಚು ಮಾಡಿದ ಹಣವೂ ಬಂದಿಲ್ಲ.ಶೇಖರಪ್ಪ ರೈತ ಅದರಕಟ್ಟಿ ಗ್ರಾಮ ಗದಗ ಜಿಲ್ಲೆ
6300 ಹೆಕ್ಟೇರ್ಗೆ ಕುಸಿತ..
‘ಧಾರವಾಡ ಜಿಲ್ಲೆಯಲ್ಲಿ ಪ್ರತಿ ವರ್ಷ 15 ರಿಂದ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೇ ಅಂತ್ಯದಲ್ಲಿಯೇ ಮುಂಗಾರು ಮಳೆ ಸುರಿದ ಪರಿಣಾಮ ಈರುಳ್ಳಿ ಬೆಳೆಗಾರರು ಹೆಸರು ಉದ್ದು ಬಿತ್ತನೆಯತ್ತ ಮುಖ ಮಾಡಿದರು. ಇದರಿದಾಗಿ ಈರುಳ್ಳಿ ಬೆಳೆ ಪ್ರದೇಶವು 6300 ಹೆಕ್ಟೇರ್ಗೆ ಕುಸಿಯಿತು. ಈ ಬಾರಿಯ ನಿರಂತರ ಮಳೆಯಿಂದಾಗಿ ಶೇ 50ರಷ್ಟು ಬೆಳೆ ಹಾನಿಯಾಯಿತು. ಉಳಿದ ಬೆಳೆ ಗುಣಮಟ್ಟದ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ’ ಎನ್ನುತ್ತಾರೆ ಧಾರವಾಡ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶೀನಾಥ ಭದ್ರಣ್ಣನವರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.