ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ವಹಿವಾಟು ಮೊತ್ತದ ಮಿತಿ ಹೆಚ್ಚಿಸುವುದಾಗಿ ನಗರದ ವ್ಯಾಪಾರಸ್ಥ ಸೀತಾರಾಮ್ ಅನಂತಶೆಟ್ಟಿ ಅವರಿಗೆ ನಂಬಿಸಿದ ವಂಚಕ, ಅವರಿಂದ ₹3.64 ಲಕ್ಷ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ಸೀತಾರಾಮ್ ಅವರ ಮೊಬೈಲ್ಗೆ ಕರೆ ಮಾಡಿರುವ ವಂಚಕ ಕ್ರೆಡಿಟ್ ಕಾರ್ಡ್ ಕಂಪನಿ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ. ಕ್ರೆಡಿಟ್ ಕಾರ್ಡ್ ವಹಿವಾಟು ಮೊತ್ತ ಹೆಚ್ಚಿಸುವುದಾಗಿ ಹೇಳಿ, ಕಾರ್ಡ್ ನಂಬರ್ ಹಾಗೂ ಒಟಿಪಿ ಪಡೆದು ಆನ್ಲೈನ್ ಮುಖಾಂತರ ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳವು; ಆರೋಪಿ ಬಂಧನ: ನಗರದ ವಿವಿಧೆಡೆ ಬೈಕ್ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿ, ₹2.50 ಲಕ್ಷ ಮೌಲ್ಯದ ಎರಡು ಪಲ್ಸರ್ ಮತ್ತು ಎರಡು ಸ್ಕೂಟಿ ವಶಪಡಿಸಿಕೊಂಡಿದ್ದಾರೆ. ಇನ್ಸ್ಪೆಕ್ಟರ್ ಎ.ಜಿ. ಚವಾಣ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.
ಆರೋಪಿತರ ಬಂಧನ: ವಂಚನೆ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯ ವಶಕ್ಕೆ ಒಪ್ಪಿಸಿದ್ದಾರೆ.
ಸತೀಶ ವಿಜಯ ಡಾಂಗೆ ಮತ್ತು ವಿಜಯ ವಸಂತರಾವ್ ಡಾಂಗೆ ಬಂಧಿತರು. ಶಹರ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತರು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಇನ್ಸ್ಪೆಕ್ಟರ್ ಆನಂದ ಒನಕುದರಿ ನೇತೃತ್ವದ ತಂಡ ಮಹಾರಾಷ್ಟ್ರದಲ್ಲಿ ಆರೋಪಿತರನ್ನು ಬಂಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.