
ಧಾರವಾಡ: ‘ವಾಟ್ಸ್ ಆ್ಯಪ್’, ‘ಎಸ್ಎಂಎಸ್’ ಸಂದೇಶಗಳಲ್ಲಿನ ಆಮಿಷಗಳ ಬಲೆಗೆ ಗ್ರಾಹಕರು ಬೀಳಬಾರದು. ಗ್ರಾಹಕರು ಜಾಗೃತವಾಗಿರಬೇಕು’ ಎಂದು ಕರ್ನಾಟಕ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ (ಸಿಎಒಸಿವಿಒ) ಸಂಸ್ಥಾಪಕ ವಿ.ಕೆ.ಸೋಮಶೇಖರ್ ಹೇಳಿದರು.
ಸಿಎಒಸಿವಿಒ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್ಎಐ) ವತಿಯಿಂದ ರಾಯಪುರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಹಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮೊಬೈಲ್ ಫೋನ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಆನ್ಲೈನ್ ವಂಚನೆಗಳು ಹೆಚ್ಚುತ್ತಿವೆ. ‘ಫೋನ್’, ‘ಚಾಟ್’ ಮಾಡಿ ವಂಚಿಸುತ್ತಾರೆ. ಮೊಬೈಲ್ ಫೋನ್ ದುರಾಭ್ಯಾಸಗಳು ಬದುಕನ್ನೇ ಹಾಳು ಮಾಡುತ್ತವೆ’ ಎಂದು ಹೇಳಿದರು.
‘ಆನ್ಲೈನ್ ವಂಚನೆಯಾದಾಗ ಅದನ್ನು ಮುಚ್ಚಿಡಬಾರದು. ವಂಚನೆಯನ್ನು ಮುಚ್ಚಿಟ್ಟಾಗ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಬೇಕು. ಸಮಸ್ಯೆ ಪರಿಹರಿಸಿಕೊಳ್ಳಬೇಕು’ ಎಂದು ಹೇಳಿದರು.
‘ಆಧಾರ್ ಚೀಟಿಯನ್ನೇ ನಕಲು ಮಾಡಿ ನಮ್ಮ ಹೆಸರಿನಲ್ಲಿ ಬೇರೊಬ್ಬರು ಮೊಬೈಲ್ ಫೋನ್, ಸಿಮ್ ಖರೀದಿಸಿ ವಂಚಿಸುವ ಸಾಧ್ಯತೆಗಳೂ ಇರುತ್ತವೆ. ಈ ಬಗ್ಗೆಯೂ ಹುಷಾರಾಗಿರಬೇಕು. ದಾಖಲೆ ನಕಲಿ ಎಂದು ನಾವು ಸಾಬೀತುಪಡಿಸಬೇಕಾದ ಸಂದರ್ಭಗಳು ಎದುರಾಗುತ್ತವೆ’ ಎಂದರು.
‘ಗ್ರಾಹಕರು ತಮ್ಮ ಮೊಬೈಲ್ ಫೋನ್ನಲ್ಲಿನ ಐಎಂಇಐ (ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ) ಸಂಖ್ಯೆನ್ನು ಬರೆದಿಟ್ಟುಕೊಳ್ಳಬೇಕು. ಮೊಬೈಲ್ ಪೋನ್ ಕಳೆದುಹೋದಾಗ ಪತ್ತೆ ಹಚ್ಚಲು ಈ ನಂಬರ್ ಇದ್ದರೆ ಅನುಕೂಲವಾಗುತ್ತದೆ’ ಎಂದರು.
ಗ್ರಾಹಕರು ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಪ್ರತಿ ಕ್ಷೇತ್ರದಲ್ಲೂ ನಿಯಂತ್ರಣ ಸಂಸ್ಥೆಗಳು ಇವೆ. ಟಿಆರ್ಎಐ, ಇನ್ಶ್ಯೂರೆನ್ಸ್ ರೆಗ್ಯುಲೆಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ), ರಿಯಲ್ ಎಸ್ಟೇಟ್ ರೆಗ್ಯುಲೆಟರಿ ಅಥಾರಿಟಿ (ಆರ್ಇಆರ್ಎ) ಮೊದಲಾದವುಗಳ ಕಾರ್ಯ ಚಟುವಟಿಕೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಟಿಆರ್ಎಐ ಕಾರ್ಯಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಪಿಪಿಟಿ (ಪವರ್ಪಾಯಿಂಟ್ ಪ್ರೆಸೆಂಟೇಷನ್) ಮೂಲಕ ವಿವರಿಸಿದರು.
ಜಿಟಿಟಿಸಿ ಪ್ರಾಂಶುಪಾಲ ಶಿವಾನಂದ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಕೌಶಲಾಭಿವೃದ್ಧಿ ಕೇಂದ್ರದ ಮುಖ್ಯಸ್ಥ ಬಸವರಾಜ ಬಿ, ಬಿಎಸ್ಎನ್ಎಲ್ ಅಧಿಕಾರಿ ರಾಘವೇಂದ್ರ ಕುಲಕರ್ಣಿ, ಏರ್ಟೆಲ್ ಇಮ್ತಿಯಾಜ್, ಜಿಯೋ ಸಂಸ್ಥೆ ಮಹೇಂದ್ರ ದೇಶಪಾಂಡೆ, ಪ್ರಶಾಂತ ಸುತಾರ್ ಉಪಸ್ಥಿತರಿದ್ದರು.
ಗ್ರಾಹಕರು ತಮ್ಮ ಹಕ್ಕು ಬಾಧ್ಯತೆ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕು. ನಮ್ಮ ಕಾರ್ಯಗಳನ್ನು ನಾವು ಸರಿಯಾಗಿ ನಿರ್ವಹಿಸಿದರೆ. ತೊಂದರೆಗಳು ಸಮಸ್ಯೆಗಳು ಎದುರಾಗದಂತೆ ಎಚ್ಚರವಹಿಸಬೇಕುಐ.ಜಿ.ಪಾಟೀಲ ಸಂಯೋಜಕ ಸಿಎಒಸಿವಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.