ADVERTISEMENT

ಮಾಫಿಯಾದಿಂದ ಪತಂಜಲಿಗೆ ಹಿನ್ನಡೆ: ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 14:53 IST
Last Updated 2 ಜುಲೈ 2020, 14:53 IST
ಪ್ರಮೋದ ಮುತಾಲಿಕ್‌
ಪ್ರಮೋದ ಮುತಾಲಿಕ್‌   

ಹುಬ್ಬಳ್ಳಿ: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಬಾಬಾ ರಾಮದೇವ್‌ ಅವರ ಪತಂಜಲಿ ಔಷಧಿ ಉತ್ತಮವಾಗಿತ್ತು. ಬಹುರಾಷ್ಟ್ರೀಯ ಕಂಪನಿಗಳ ಮಾಫಿಯಾದಿಂದ ಪತಂಜಲಿಗೆ ಹಿನ್ನಡೆಯಾಯಿತು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಡಾ. ಗಿರಿಧರ ಕಜೆ ಮತ್ತು ಪತಂಜಲಿ ಸಂಸ್ಥೆ ಶೋಧಿಸಿದ ಔಷಧಿಗಳು ಪರಿಣಾಮಕಾರಿಯಾಗಬಲ್ಲವು. ಕೊರೊನಾಕ್ಕೆ ಆಯುರ್ವೇದಿಕ್ ಔಷಧವೇ ಮದ್ದು, ಬಹುರಾಷ್ಟ್ರೀಯ ಕಂಪನಿಗಳು ಕೇಂದ್ರ ಸರ್ಕಾರದ ಮೂಲಕ ಒತ್ತಡ ಹೇರಿ ಪತಂಜಲಿ ಕೊರೊನಾ ಔಷಧಿಯನ್ನಾಗಿ ಘೋಷಿಸದಂತೆ ತಡೆದವು. ಪತಂಜಲಿಯ ಔಷಧಿಯಲ್ಲಿ ರೋಗ ನಿರೋಧಕ ಶಕ್ತಿಯಿದ್ದು, ಈಗ ಎಲ್ಲರಿಗೂ ಇದೇ ಶಕ್ತಿ ಬೇಕಾಗಿದೆ’ ಎಂದರು.

ಕೊರೊನಾ ಅವಕಾಶ: ಭಾರತದಲ್ಲಿ ಚೀನಾ ದೇಶದ ಯಂತ್ರಗಳು ಹಾಗೂ ಮಾರುಕಟ್ಟೆ ಆಳವಾಗಿ ಬೇರೂರಿದ್ದು ಒಮ್ಮೆಲೆ ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕನಿಷ್ಠ ಹತ್ತು ವರ್ಷಗಳಾದರೂ ಬೇಕಾಗುತ್ತದೆ. ಕೊರೊನಾದ ನೆಪದಲ್ಲಿ ನಾವೇ ಹೊಸತನಗಳನ್ನು ಕಂಡುಕೊಳ್ಳಬೇಕು ಎಂದರು.

ADVERTISEMENT

‘ನಮ್ಮ ಶಕ್ತಿ ಮತ್ತು ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಕೊರೊನಾ ಉತ್ತಮ ಅವಕಾಶ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದರು.

ದತ್ತಪೀಠ ಹಿಂದೂಗಳಿಗೆ ಮುಕ್ತವಾಗದ ತನಕ ಸೇನೆಯ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಗಡ್ಡ ಕತ್ತರಿಸುವುದಿಲ್ಲವೆಂದು ಪ್ರಮಾಣ ಮಾಡಿದ್ದಾರೆ ಎಂದರು. ಜಿಲ್ಲಾ ಘಟಕದ ಗೌರವಾಧ್ಯಕ್ಷ ರಾಜು ಗಾಡಗೋಳಿ ಇದ್ದರು.

ಮನೆಯಿಂದಲೇ ಜಪಯಜ್ಞ

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಯಲ್ಲಿರುವ ದತ್ತಪೀಠವನ್ನು ಹಿಂದೂಗಳಿಗೆ ನೀಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ನಡೆಯುವ ಜಪಯಜ್ಞ ಲಾಕ್‌ಡೌನ್‌ ಇರುವ ಕಾರಣ ಮನೆಯಿಂದಲೇ ನಡೆಯಲಿದೆ.

ನಿತ್ಯ ಒಂದು ಸಾವಿರ ಜನ ‘ಶ್ರೀ ಗುರುದೇವದತ್ತ’ ನಾಮ ಜಪ ಪಠಿಸಲಿದ್ದಾರೆ. ಒಂದು ತಿಂಗಳಲ್ಲಿ ಪಠಣ ಕಾರ್ಯ ಪೂರ್ಣಗೊಂಡು ಒಂದು ಕೋಟಿಯಾಗಲಿದೆ ಎಂದು ಮುತಾಲಿಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.