ಹುಬ್ಬಳ್ಳಿ: ‘ಯಾವುದೇ ಅಭಿವೃದ್ಧಿ ಕಾಮಗಾರಿಗೆ ಜನರ ಸಹಕಾರ ಮುಖ್ಯ. ಸ್ಮಾರ್ಟ್ ಸಿಟಿ ಯೋಜನೆಯಡಿ ನಾಲಾಗೆ ಗೇಬಿಯನ್ ವಾಲ್ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಯಾದ ಬಳಿಕ, ನಾಲಾ ತಡೆಗೋಡೆ ಕಾಮಗಾರಿಯು ಬಿಡನಾಳದವರೆಗೂ ನಡೆಯಲಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ವಿಕಾಸ ನಗರ, ಸಿದ್ಧಲಿಂಗೇಶ್ವರ ನಗರ ಹಾಗೂ ರಾಜಧಾನಿ ಕಾಲೊನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾನತಾಡಿದ ಅವರು, ‘ಸೇತುವೆಯಿಂದ ಮೂರು ಕಾಲೊನಿಗಳ ಜನರಿಗೆ ಅನುಕೂಲವಾಗಲಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.
‘ಮೊದಲ ಹಂತದ ಹಸಿರು ಸಂಚಾರಿ ಪಥ (ಗ್ರೀನ್ ಮೊಬಿಲಿಟಿ ಕಾರಿಡಾರ್) ಉಣಕಲ್ನಲ್ಲಿ ಪೂರ್ಣಗೊಂಡಿದೆ. ನಾಲಾ ಪಕ್ಕದಲ್ಲೇ ನಡಿಗೆ ಪಥ ಹಾಗೂ ಸೈಕಲ್ ಪಥ ನಿರ್ಮಿಸಲಾಗಿದೆ. ವ್ಯಾಯಾಮ ಮಾಡಲು ಉದ್ಯಾನವಿದೆ. ಇಲ್ಲಿಯೂ ತಡೆಗೋಡೆ, ನಡಿಗೆ ಪಥ ಹಾಗೂ ಸೈಕಲ್ ಪಥ ನಿರ್ಮಿಸಲಾಗುವುದು’ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ, ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ವಿನಾಯಕ ಧೋಂಗಡಿ, ಕೆ.ಎಂ. ಚೌಧರಿ, ಬಸವರಾಜ ಬೆಳ್ಳಿಗಟ್ಟಿ, ರಾಜು ಮಿಸ್ಕಿನ್, ಬಸವರಾಜ ಬ್ಯಾಹಟ್ಟಿ, ವಾಸು ಕೋನರೆಡ್ಡಿ, ನಾಗರಾಜ ನಾಯ್ಕರ, ವೆಂಕಟೇಶ ಕಬಾಡಿ, ಗೋವಿಂದ ಮಿಸ್ಕಿನ್, ದೀಪಕ ಎಂ. ಹಾಗೂ ಗಣಪತಿ ಹಬೀಬ ಇದ್ದರು.
ಮಳೆ ಹಾನಿ ಪರಿಶೀಲನೆ
ಮಳೆಯಿಂದ ಹಾನಿಯಾಗಿರುವ ವಾರ್ಡ್ 49ರ ಹನುಮಂತ ನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಜಗದೀಶ್ ಶೆಟ್ಟರ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಅವರು, ಮುಂದೆ ಮಳೆ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾನಿಯ ಸಮೀಕ್ಷೆ ನಡೆಸಿ, ನಿಯಮಾನುಸಾರ ಪರಿಹಾರ ನೀಡಬೇಕು ಎಂದು ಸೂಚಿಸಿದರು.
ಅವಳಿನಗರದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ₹97.75 ಲಕ್ಷ ಹಾನಿಯಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.