ಹುಬ್ಬಳ್ಳಿ: ‘ಜನರು ಜನಪ್ರತಿನಿಧಿಗಳ ಕೆಲಸ ನೋಡಿಮತ ಹಾಕುತ್ತಾರೆ, ಇಲ್ಲಿ ಜಾತಿ ರಾಜಕಾರಣ ನಡೆಯದು’ಎಂದು ಶಾಸಕ ಜಗದೀಶ ಶೆಟ್ಟರ್ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ತಿರುಗೇಟು ನೀಡಿದರು.
ಹುಬ್ಬಳ್ಳಿಯ ಮತಗಟ್ಟೆ ಸಂಖ್ಯೆ 123ರಲ್ಲಿ ಮಂಗಳವಾರ ಮತದಾನ ಮಾಡಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಜಾತ್ಯತೀತ ಮನೋಭಾವದ ಜನರು, ಅಭ್ಯರ್ಥಿ ಮಾಡಿದ ಕೆಲಸ ಹಾಗೂ ಆತನ ಸಾಧನೆ ನೋಡಿ ಮತ ಹಾಕುತ್ತಾರೆ ಎಂದರು.
ಬಿಜೆಪಿಯವರು ಪ್ಲಾಸ್ಟಿಕ್ ಹಸು ತೋರಿಸಿ ಮತ ಕೇಳುತ್ತಾರೆ ಎಂಬ ವಿನಯ ಕುಲಕರ್ಣಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು ‘ನಾಲ್ಕು ಹಸು ಸಾಕಿದೊಡನೆ ಅದು ಗೋವಿನ ಪ್ರೀತಿ ಆಗದು. ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿ’ಎಂದರು.
22 ಸೀಟು ಖಚಿತ: ‘ರಾಜ್ಯದ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದ 14 ಕ್ಷೇತ್ರದಲ್ಲಿ 10 ಹಾಗೂ ಎರಡನೇ ಹಂತದ 14 ಕ್ಷೇತ್ರದಲ್ಲಿ 12 ಸೇರಿ ಒಟ್ಟು 22 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ’ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ್, ಮಗ ಸಂಕಲ್ಪ ಸಹೋದರ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮತದಾನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.