ADVERTISEMENT

ಆರೋಗ್ಯಪೂರ್ಣ ಸಮಾಜಕ್ಕೆ ಪ್ಲಾಸ್ಟಿಕ್‌ ಮಾರಕ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:15 IST
Last Updated 30 ಆಗಸ್ಟ್ 2019, 19:15 IST
ಹುಬ್ಬಳ್ಳಿ ಅಕ್ಕಿಹೊಂಡದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೋಟ್‌ಬುಕ್‌ ವಿತರಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಅಕ್ಕಿಹೊಂಡದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶುಕ್ರವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೋಟ್‌ಬುಕ್‌ ವಿತರಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಶಾಲೆಯಲ್ಲಿ ಹಾಗೂ ಮನೆಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಳಕೆ ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಶಪಥ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಅಕ್ಕಿಹೊಂಡದ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆ ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ನೆರೆ ಪೀಡಿತ ಪ್ರದೇಶಗಳ ಮಕ್ಕಳಿಗೆ ನೋಟ್‌ ಬುಕ್‌ ವಿತರಣೆ ಮಾಡಿ ಅವರು ಮಾತನಾಡಿದರು.

ಆರೋಗ್ಯಪೂರ್ಣ ಸಮಾಜಕ್ಕೆ ಪ್ಲಾಸ್ಟಿಕ್‌ ಮಾರಕವಾಗಿದೆ. ಅದರಿಂದ ಕ್ಯಾನ್ಸರ್‌ನಂಥ ಭಯಾನಕ ಕಾಯಿಲೆಗಳು ಬರುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತರಾಗಿ ಪ್ಲಾಸ್ಟಿಕ್‌ ಬಳಕೆ ಮಾಡದಿರಲು ಮುಂದಾಗಬೇಕು ಎಂದರು.

ADVERTISEMENT

‘ಕೇಂದ್ರ ಸಚಿವನಾಗಿದ್ದಕ್ಕೆ ಸಂಘ–ಸಂಸ್ಥೆಗಳು ಹೂವಿನ ಹಾರ ಹಾಕಿ ಸನ್ಮಾನಿಸಲು ಮುಂದಾಗಿದ್ದವು. ಅದರ ಬದಲು ನೋಟ್‌ ಬುಕ್‌ ನೀಡಿ ಎಂದಿದ್ದೆ. ವಿವಿಧ ಸಂಘಗಳಿಂದ ಈವರೆಗೆ 30 ಸಾವಿರ ನೋಟ್‌ಬುಕ್‌ಗಳು ಬಂದಿವೆ. ಯಾವ ಶಾಲೆಯ ಮಕ್ಕಳಿಗೆ ಅಗತ್ಯವಿದೆ ಎಂದು ಸಮೀಕ್ಷೆ ನಡೆಸಲು ಕಾರ್ಯಕರ್ತರಿಗೆ ತಿಳಿಸಿದ್ದೇನೆ’ ಎಂದರು.

‘ಅಕ್ಕಿಹೊಂಡದ ಸರ್ಕಾರಿ ಶಾಲೆಗೆ ಎರಡು ಕಂಪ್ಯೂಟರ್‌ ನೀಡುತ್ತೇನೆ. ಅವು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಳಕೆಯಾಗುವಂತೆ ಶಿಕ್ಷಕರು ನೋಡಿಕೊಳ್ಳಬೇಕು’ ಎಂದರು.

ನಂತರ ಶಿಂಪಿಗಲ್ಲಿ ಗುರುಮಂದಿರದ ಎದುರು ಅಳವಡಿಸಲಾದ ಹೈಮಾಸ್ಟ್‌ ದೀಪಕ್ಕೆ ಚಾಲನೆ ನೀಡಿದರು. ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಮುಖಂಡರಾದ ಶಿವು ಮೆಣಸಿನಕಾಯಿ, ಚಂದ್ರಶೇಖರ ಗೋಕಾಕ, ಡಿ.ಕೆ. ಚವ್ಹಾಣ, ಸುಧೀರ ಸರಾಫ್‌, ಶಂಕರಣ್ಣ ಬಿಜವಾಡ, ನಾರಾಯಣ ಜರತಾರಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.