ಹುಬ್ಬಳ್ಳಿ: ಇಡೀ ದೇಶ ರಾಮಮಯವಾಗಿದೆ. ಅದಕ್ಕೆ ಕಾಂಗ್ರೆಸ್ಗೆ ಹೊಟ್ಟೆಕಿಚ್ಚಾಗಿದೆ. ಬೆಂಕಿ ಹೊತ್ತಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿದೆ ಎಂದು ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಟೀಕಿಸಿದರು.
1992ರ ಗಲಭೆ ಪ್ರಕರಣದಲ್ಲಿ ಬಂಧಿತನಾಗಿರುವ ಇಲ್ಲಿನ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಅವರ ಮನೆಗೆ ಗುರುವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ಶ್ರೀಕಾಂತ ಅವರನ್ನು ಬಂಧಿಸಿರುವುದು ಸರ್ಕಾರದ ಅಮಾನವೀಯ, ಅಮಾನುಷ ಕ್ರಮವಾಗಿದೆ. ಹಿಂದೂ ಕಾರ್ಯಕರ್ತರಲ್ಲಿ ಭಯ ಹುಟ್ಟಿಸಲೆಂದೇ ಈ ರೀತಿ ಬಂಧನ ಮಾಡಿದ್ದಾರೆ’ ಎಂದು ಆರೋಪಿಸಿದರು.
ಯತೀಂದ್ರ ಅವರು ತಮ್ಮ ತಂದೆ ಸಿದ್ದರಾಮಯ್ಯ ಅವರ ಧೋತಿ ಹಿಡಿದು ಬೆಳೆದಿದ್ದಾರೆ. ಇವರಿಗೆ ಹಿಂದೂ, ಹಿಂದುತ್ವ, ದೇಶ, ಧರ್ಮ ಬಗ್ಗೆ ಏನೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ನೊಂದು ಗೋಧ್ರಾ ಘಟನೆ ಸಂಭವಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳುವ ಮೂಲಕ ಮುಸ್ಲಿಮರಿಗೆ ಗಲಭೆ, ದೊಂಬೆ ಎಬ್ಬಿಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
‘ಹಿಂದೂರಾಷ್ಟ್ರ ಆಗುವುದು ತಡೆಯಲಾಗದು’
ಹುಬ್ಬಳ್ಳಿ: ‘2024ರಲ್ಲಿ ನರೇಂದ್ರ ಮೋದಿ ಅವರು ಪುನಃ ಪ್ರಧಾನಿಯಾದ ಬಳಿಕ ಭಾರತವು ಹಿಂದೂ ರಾಷ್ಟ್ರ ಆಗಲಿದೆ. ತಾಕತ್ತಿದ್ದರೆ ಕಾಂಗ್ರೆಸ್ ತಡೆಯಲಿ’ ಎಂದು ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲು ಹಾಕಿದರು.
‘ಪಾಕಿಸ್ತಾನ ಮುಸ್ಲಿಮರ ದೇಶ ಆಗುವುದಾದರೆ ಭಾರತ ಹಿಂದೂ ರಾಷ್ಟ್ರ ಏಕೆ ಆಗಬಾರದು. ಇಲ್ಲಿ ಮುಸ್ಲಿಮರು, ಕ್ರೈಸ್ತರು ಸೇರಿ ಎಲ್ಲರೂ ವಾಸಿಸಬಹುದು. ನಾವು ಯಾರನ್ನೂ ಹೊರಹಾಕಲ್ಲ’ ಎಂದು ಹೇಳಿದರು.
‘ಶ್ರೀಕಾಂತ ಪೂಜಾರಿ ರೌಡಿಶೀಟರ್, ಅಪರಾಧಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಸ್ಥಳೀಯ ಶಾಸಕ (ಪ್ರಸಾದ್ ಅಬ್ಬಯ್ಯ) ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರು, ರಾಮನ ಭಕ್ತರೇ ಮುಖ್ಯಮಂತ್ರಿ ಅವರ ಟಾರ್ಗೆಟ್’ ಎಂದು ಮುತಾಲಿಕ್ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.