ಹುಬ್ಬಳ್ಳಿ: ಪೂನಾದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ಶಾರ್ಟ್ ಸರ್ಕಿಟ್'ನಿಂದ ಹೊತ್ತಿ ಉರಿದ ಘಟನೆ ಭಾನುವಾರ ನಸುಕಿನ ಜಾವ ನಗರದ ಹು-ಧಾ ಬೈಪಾಸ್ ಬಳಿಯ ಕಾರವಾರ ರಸ್ತೆಯಲ್ಲಿ ನಡೆದಿದೆ. 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೇಷ್ಮಾ ಟ್ರಾವೆಲ್ಸ್ ಕಂಪನಿಗೆ ಸೇರಿದ ಬಸ್ ಅದಾಗಿದ್ದು, ನಸುಕಿನ ಜಾವ 2ರ ವೇಳೆ ಬಸ್'ನಲ್ಲಿ ಏಕಾಏಕಿ ಸ್ಫೋಟವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದಾರೆ. ಕೆಲವೇ ಸಮಯದಲ್ಲಿ ಬಸ್'ಗೆ ಬೆಂಕಿ ಆವರಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಎರಡು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಟೈರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಎಂದು ಖಾಸಗಿ ಬಸ್'ನವರು ತಿಳಿಸಿದ್ದಾರೆ. ಬಸ್'ನಲ್ಲಿ ಪರ್ಫ್ಯೂಮ್ ಸ್ಪ್ರೇಯರ್ ಸಾಗಾಟ ಸಹ ನಡೆಯುವುದರಿಂದ, ಉಷ್ಣತೆಗೆ ಅದರಲ್ಲಿರುವ ಗ್ಯಾಸ್ ಸ್ಫೋಟಗೊಳ್ಳುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಹೇಳುತ್ತಾರೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.