ADVERTISEMENT

ಹುಬ್ಬಳ್ಳಿಯ ರಾಜನಗರದ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 6:53 IST
Last Updated 20 ಫೆಬ್ರುವರಿ 2026, 6:53 IST
ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ ವೈದ್ಯ ಅವರು ಗುರುವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು 
ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ ವೈದ್ಯ ಅವರು ಗುರುವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು    

ಹುಬ್ಬಳ್ಳಿ: ಕರ್ನಾಟಕ ಮತ್ತು ಜಮ್ಮು–ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಫೆಬ್ರುವರಿ 24ರಿಂದ 28ರವರೆಗೆ ನಡೆಯಲಿದ್ದು, ಸಿದ್ಧತೆ ಆರಂಭವಾಗಿವೆ.

ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ ವೈದ್ಯ ಅವರು ಗುರುವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಸೌಲಭ್ಯಗಳನ್ನು ಪರಿಶೀಲಿಸಿದರು. ಬಿಸಿಸಿಐ ತಟಸ್ಥ ಪಿಚ್‌ ಕ್ಯುರೇಟರ್ ಪ್ರಕಾಶ್‌ ಆದವ್‌ ಅವರೂ ಬಂದಿದ್ದು, ಅವರ ಮಾರ್ಗದರ್ಶನದಲ್ಲಿ ಪಿಚ್‌ ಸಿದ್ಧತೆ ನಡೆದಿದೆ. ಫೈನಲ್‌ ಪಂದ್ಯ ನೇರ ಪ್ರಸಾರವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಸಿಸಿಐ ಬ್ರಾಡ್‌ಕಾಸ್ಟಿಂಗ್ ತಂಡವೂ ಕ್ರೀಡಾಂಗಣಕ್ಕೆ ಬಂದು ಪರಿಶೀಲಿಸಿತು. 

ಪಂದ್ಯದ ನೇರ ಪ್ರಸಾರ, ವೀಕ್ಷಕ ವಿವರಣೆಗೆ ವ್ಯವಸ್ಥೆ ಮಾಡಬೇಕಿದೆ. ಪಂದ್ಯ ನಡೆಸಲು ಯಾವ ಸೌಲಭ್ಯಗಳ  ಅವಶ್ಯಕತೆ ಇದೆ ಎಂಬ ಬಗ್ಗೆ ಅವಿನಾಶ ವೈದ್ಯ ಅವರು ಕೆಎಸ್‌ಸಿಎಗೆ ಮತ್ತು ಪಿಚ್‌ ಕ್ಯುರೇಟರ್‌ ಅವರು ಬಿಸಿಸಿಐಗೆ ವರದಿ ನೀಡಿದ್ದಾರೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ. 

ADVERTISEMENT

ಪಂದ್ಯ ವೀಕ್ಷಣೆಗೆ ಬರುವ ಜನರಿಗೆ ಎಷ್ಟು ಆಸನಗಳ ವ್ಯವಸ್ಥೆ ಮಾಡಬೇಕು. ಪಂದ್ಯಕ್ಕೆ ಯಾವ ರೀತಿ ಸಿದ್ಧತೆ ಕೈಗೊಳ್ಳಬೇಕು ಎಂಬ ಬಗ್ಗೆ ಶುಕ್ರವಾರ ಸಭೆ ನಡೆಸಿ, ಬಿಸಿಸಿಐ ಸೂಚನೆಯಂತೆ ಸಿದ್ಧತೆ ನಡೆಯಲಿದೆ.

ಜಮ್ಮು ಕಾಶ್ಮೀರ ತಂಡವು ಶುಕ್ರವಾರವೇ ನಗರಕ್ಕೆ ಬರುವ ಸಾಧ್ಯತೆ ಇದ್ದು, ಯಾವ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಲಿದೆ ಎಂಬುದು ಖಚಿತವಾಗಿಲ್ಲ. ಕರ್ನಾಟಕ ತಂಡ ಫೆ.21ರಂದು ನಗರಕ್ಕೆ ಬರುವ ಸಾಧ್ಯತೆ ಇದೆ.

ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಫೈನಲ್‌: ಇಲ್ಲಿನ ಕ್ರೀಡಾಂಗಣದಲ್ಲಿ ಈವರೆಗೆ ಒಂಬತ್ತು ರಣಜಿ ಟ್ರೋಫಿ ಪಂದ್ಯಗಳು ನಡೆದಿವೆ. ಇದೇ ಮೊದಲ ಬಾರಿಗೆ ಫೈನಲ್ ಪಂದ್ಯ ನಡೆಯಲಿದೆ. ಆತಿಥೇಯ ತಂಡವು ಇಲ್ಲಿ ಒಮ್ಮೆಯೂ ಸೋಲು ಕಂಡಿಲ್ಲ.

ಕಳೆದ ನವೆಂಬರ್‌ನಲ್ಲಿ ಇಲ್ಲಿಯೇ ನಡೆದಿದ್ದ ಪ್ರಸಕ್ತ ಟೂರ್ನಿಯ ಚಂಡೀಗಡ ಎದುರಿನ ಪಂದ್ಯದಲ್ಲಿ ಕರ್ನಾಟಕ ತಂಡವು ಇನಿಂಗ್ಸ್‌ ಹಾಗೂ 185 ರನ್‌ಗಳಿಂದ ಜಯ ಗಳಿಸಿತ್ತು.

ರಣಜಿ ಅಲ್ಲದೆ ಭಾರತ ‘ಎ’ ಮತ್ತು ವೆಸ್ಟ್‌ ಇಂಡಿಸ್‌ ‘ಎ’,  ಭಾರತ ‘ಎ’–ಶ್ರೀಲಂಕಾ ‘ಎ’, ಭಾರತ ‘ಎ’ –ನ್ಯೂಜಿಲೆಂಡ್ ‘ಎ’ ತಂಡಗಳ ನಡುವಿನ ಪಂದ್ಯಗಳು ಮತ್ತು ಕರ್ನಲ್ ಸಿ.ಕೆ.ನಾಯ್ಡು, 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌  ಟೂರ್ನಿಯ ಪಂದ್ಯಗಳು ಸಹ ಇಲ್ಲಿ ನಡೆದಿವೆ. ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ, ಅಧ್ಯಕ್ಷ ಅಲ್ತಾಫ್‌ ಕಿತ್ತೂರು, ವ್ಯವಸ್ಥಾಪಕ ಟೋನಿ ಝಳಕಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.