ADVERTISEMENT

ಪುಸ್ತಕ ವ್ಯಾಪಾರಿಗಳಿಗೆ ನೆರವು ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 11:05 IST
Last Updated 6 ಜುಲೈ 2021, 11:05 IST

ಹುಬ್ಬಳ್ಳಿ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಮಧ್ಯಮ ಮತ್ತು ಸಣ್ಣ ಪುಸ್ತಕ ವ್ಯಾಪಾರಿಗಳು ಅತೀವ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ನೆರವು ನೀಡಬೇಕು ಎಂದು ಅಖಿಲ ಕರ್ನಾಟಕ ಪುಸ್ತಕ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಶಿವಣ್ಣ ಎಸ್‌. ಹಂಗರಕಿ ಮನವಿ ಮಾಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೋವಿಡ್‌ ಮೊದಲ ಮತ್ತು ಎರಡನೆ ಅಲೆಯ ಕಾರಣದಿಂದಾಗಿ ಬಹುತೇಕ ಎರಡು ವರ್ಷಗಳಿಂದ ಪುಸ್ತಕದ ಅಂಗಡಿಗಳನ್ನು ತೆರೆದಿಲ್ಲ. ಇದರಿಂದಾಗಿ ನಯಾಪೈಸೆಯೂ ವ್ಯಾಪಾರವಾಗಿಲ್ಲ. ಲಾಕ್‌ಡೌನ್‌ ಘೋಷಣೆಗಿಂತ ಮೊದಲೇ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಿದ್ದ ಪುಸ್ತಕಗಳನ್ನು ಸಂಗ್ರಹಿಸಿಕೊಟ್ಟುಕೊಂಡಿದ್ದೆವು. ಲಾಕ್‌ಡೌನ್‌ ಜಾರಿಯಾದ್ದರಿಂದ ಪುಸ್ತಕಗಳ ದಾಸ್ತಾನು ನಮ್ಮಲ್ಲಿಯೇ ಉಳಿದಿವೆ. ಇದರಿಂದ ನಷ್ಟವೂ ಹೆಚ್ಚಾಗಿದೆ’ ಎಂದರು.

‘ಮುಂಗಡವಾಗಿ ಪುಸ್ತಕಗಳನ್ನು ನೀಡಿದವರು ಹಣ ನೀಡುವಂತೆ ಕೇಳುತ್ತಿದ್ದಾರೆ. ಅಂಗಡಿಯ ಕಟ್ಟಡ ಬಾಡಿಗೆ, ವಿದ್ಯುತ್‌ ಬಿಲ್‌ ಹಾಗೂ ನಿರ್ವಹಣೆ ಹೊರೆಯಾಗಿದೆ. ಎರಡು ವರ್ಷಗಳ ಹಿಂದೆಯೇ ತಂದಿಟ್ಟುಕೊಂಡಿದ್ದ ಪುಸ್ತಕ ಸಾಮಗ್ರಿಗಳು ಈಗ ಹಾಳಾಗಿವೆ. ಆದ್ದರಿಂದ ಸರ್ಕಾರ ನೆರವಾಗಬೇಕು’ ಎಂದರು. ಸಂಭಾವ್ಯ ಮೂರನೆ ಅಲೆಯಲ್ಲಿ ಲಾಕ್‌ಡೌನ್ ಮಾಡಿದರೆ ನಮಗೂ ದಿನಕ್ಕೆ ಎರಡು ತಾಸು ವ್ಯಾಪಾರ ಮಾಡಲು ಅವಕಾಶ ಕೊಡಬೇಕು ಎಂದು ಕೋರಿದರು.

ADVERTISEMENT

ಪುಸ್ತಕ ವ್ಯಾಪಾರಿಗಳಾದ ಶಿವಾನಂದ ಕರಡಿ, ಮಸೂದ್‌ ಅಹ್ಮದ್‌ ಖತೀಜ್‌, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.