ಹುಬ್ಬಳ್ಳಿ: ಮಳೆ ಅಬ್ಬರಕ್ಕೆ ಗುಂಡಿ ಬಿದ್ದು ಹದಗೆಟ್ಟಿದ್ದ ಅವಳಿನಗರದ ರಸ್ತೆಗಳ ದುರಸ್ತಿ ಕೆಲಸವನ್ನು ಪಾಲಿಕೆಯು ಸೋಮವಾರದಿಂದ ಆರಂಭಿಸಿದೆ. ಚನ್ನಮ್ಮ ವೃತ್ತದ ಆಸುಪಾಸಿನ ರಸ್ತೆಗಳಾದ ನೀಲಿಜನ್ ರಸ್ತೆ, ಕೋರ್ಟ್ ವೃತ್ತ, ಗ್ಲಾಸ್ ಹೌಸ್, ಈಜುಕೋಳ ರಸ್ತೆ, ಉಣಕಲ್ ಸೇರಿದಂತೆ ವಿವಿಧೆಡೆ ಗುಂಡಿಗಳನ್ನು ಸಿಮೆಂಟ್ ಕಾಂಕ್ರೀಟ್ನಿಂದ ಮುಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ.
‘ಉತ್ತರ ವಿಭಾಗ 4 ವಲಯಗಳ ಪೈಕಿ, 2ರಲ್ಲಿ ಕೆಲಸ ಆರಂಭವಾಗಿದೆ.ಆನಂದ ನಗರ ಮುಖ್ಯರಸ್ತೆ, ನೀಲಿಜನ್ ರಸ್ತೆ, ವಿದ್ಯಾನಗರ ಸೇರಿದಂತೆ ವಿವಿಧೆಡೆ ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ. ಉಳಿದ ಎರಡು ವಲಯಗಳ ಟೆಂಡರ್ ಪ್ರಕ್ರಿಯೆ ಶೀಘ್ರ ಮುಗಿಯಲಿದೆ’ ಎಂದು ಪಾಲಿಕೆಯ ಉತ್ತರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಆರ್. ರಾಯನಗೌಡರ ತಿಳಿಸಿದರು.
‘ವಲಯ 9, 10 ಹಾಗೂ 11ರ ವ್ಯಾಪ್ತಿಯ ಇಂದಿರಾ ಗಾಜಿನ ಮನೆ, ಹಿರೇಪೇಟೆ, ಧಾರವಾಡದ ಗಾಂಧಿನಗರ ಸೇರಿದಂತೆ ವಿವಿಧೆಡೆ ದುರಸ್ತಿ ಕಾರ್ಯ ನಡೆಯುತ್ತಿದೆ’ ಎಂದು ಪಾಲಿಕೆಯ ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ಚವ್ಹಾಣ ಹೇಳಿದರು.
ಮಳೆಯಿಂದಾಗಿ ಅವಳಿನಗರದ ರಸ್ತೆಗಳು ತೀರಾ ಹದಗೆಟ್ಟಿದ್ದವು. ಮಳೆಗಾಲ ಆರಂಭಕ್ಕೂ ಮುಂಚೆ ರಸ್ತೆ ಗುಂಡಿ ಮುಚ್ಚದ ಪಾಲಿಕೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಪಾಲಿಕೆಯು ರಸ್ತೆ ಗುಂಡಿ ಮುಚ್ಚಲು ₹3.5 ಕೋಟಿ ಮೊತ್ತದ ಟೆಂಡರ್ ಕರೆದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.