ADVERTISEMENT

ಸಾಕ್ಷ್ಯ, ಆರೋಪಿಗಳನ್ನು ಗುರುತಿಸಿದ ರೂಪದರ್ಶಿ

ಡಾ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:08 IST
Last Updated 18 ಮಾರ್ಚ್ 2022, 4:08 IST

ಧಾರವಾಡ: ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದ ಸ್ಥಳದಲ್ಲಿನ ಸಾಕ್ಷ್ಯಗಳನ್ನು 4ನೇ ಹೆಚ್ಚುವರಿ ನ್ಯಾಯಾಲಯದ ಮುಂದೆ ಗುರುವಾರ ಹಾಜರುಪಡಿಸಲಾಯಿತು. 2015ರ ಆ.30ರಂದು ನಡೆದಘಟನೆಯ ಪ್ರತ್ಯಕ್ಷದರ್ಶಿಗಳಾದ ಡಾ. ಕಲಬುರ್ಗಿ ಅವರ ಪುತ್ರಿ ರೂಪದರ್ಶಿ ಹಾಗೂ ಪತ್ನಿ ಉಮಾದೇವಿ ಕಲಬುರ್ಗಿ ಅವರ ಎದುರು ಸಾಕ್ಷ್ಯಗಳನ್ನು ಪ್ರದರ್ಶಿಸಲಾಯಿತು.

ಕೊಲೆ ನಡೆದ ಸಂದರ್ಭದಲ್ಲಿಡಾ.ಕಲಬುರ್ಗಿ ಅವರು ಹಾಕಿಕೊಂಡಿದ್ದ ಶರ್ಟ್, ಬನಿಯನ್, ಪ್ಯಾಂಟ್, ಕೊರಳಲ್ಲಿದ್ದ ಗುಂಡುಗಡಿಗೆಯನ್ನು ಪುತ್ರಿ ಹಾಗೂ ಪತ್ನಿ ದೃಢಪಡಿಸಿದರು. ಪ್ರಕರಣದ ಆರೋಪಿಗಳಾದಗಣೇಶ ಮಿಸ್ಕಿನ್, ಅಮೂಲ್ ಕಾಳೆ, ಅಮಿತ್ ಬದ್ದಿ, ವಾಸುದೇವ ಸೂರ್ಯವಂಶಿ, ಪ್ರವೀಣ ಚತುರ್ ನ್ಯಾಯಾಲಯದಲ್ಲಿ ಹಾಜರಿದ್ದರು.

ಆರೋಪಿಗಳನ್ನು ನ್ಯಾಯಾಲಯದಲ್ಲಿ ಗುರುತಿಸಿದ ರೂಪದರ್ಶಿ, ಘಟನೆ ವಿವರಿಸಿ ಕಣ್ಣೀರಿಟ್ಟರು. ಗುಂಡು ಹೊಡೆದ ಆರೋಪಿ ಗಣೇಶ ಮಿಸ್ಕನ್‌ನನ್ನು ಗುರುತಿಸುವ ವೇಳೆಯೂ ಕಣ್ಣೀರು ಹಾಕುತ್ತಾ, ‘ಇವನೇ ಗುಂಡು ಹೊಡೆದಿದ್ದು’ ಎಂದರು. ನಂತರ ಬೈಕ್‌ನಲ್ಲಿ ಕರೆದುಕೊಂಡು ಹೋದ ಪ್ರವೀಣ ಚತುರನನ್ನೂ ನ್ಯಾಯಾಧೀಶರ ಎದುರು ಅವರು ಗುರುತಿಸಿದರು.

ADVERTISEMENT

ಈ ವೇಳೆ ಸಾಕ್ಷಿಗಳನ್ನು ಏಕಕಾಲಕ್ಕೆ ಪ್ರಶ್ನಿಸಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆಯಾಯಿತು. ದಿನದ ಅವಧಿ ಪೂರ್ಣಗೊಂಡಿದ್ದರಿಂದ ವಿಚಾರಣೆಯನ್ನು ಏ.5ಕ್ಕೆ ನ್ಯಾಯಾಧೀಶರು ಮುಂದೂಡಿದರು.

ನ್ಯಾಯಾಲಯದ ಆವರಣದಲ್ಲಿ ಆರೋಪಿಗಳು ಘೋಷಣೆ ಕೂಗಿ, ‘ನಾವು ಅಮಾಯಕರು. ನಿರಪರಾಧಿ ಹಿಂದೂಗಳಿಗೆ ನ್ಯಾಯ ಸಿಗಬೇಕಿದೆ. ಗೌರಿ ಲಂಕೇಶ್‌ ವಿಚಾರಣೆ ಬೇಗ ಮುಗಿಸಿ. ಆಗ ಮಾತ್ರ ನಮ್ಮ ವಿಚಾರಣೆಯೂ ಬೇಗ ಆಗುತ್ತದೆ’ ಎಂದು ಹೇಳಿ ಒಳಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.