ADVERTISEMENT

ಸಿದ್ಧಾರೂಢರ ರಥೋತ್ಸವದಲ್ಲಿ ಭಕ್ತ ಸಾಗರ

ಮೆರಗು ತಂದ ಜಾನಪದ ಕಲಾತಂಡಗಳು; ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 16:06 IST
Last Updated 12 ಮಾರ್ಚ್ 2021, 16:06 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಸದ್ಗುರು ಸಿದ್ಧಾರೂಢ ಸ್ವಾಮೀಜಿಯ ಮಹಾ ರಥೋತ್ಸವ ಅದ್ಧೂರಿಯಾಗಿ ಜರುಗಿತು- ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಶುಕ್ರವಾರ ಸದ್ಗುರು ಸಿದ್ಧಾರೂಢ ಸ್ವಾಮೀಜಿಯ ಮಹಾ ರಥೋತ್ಸವ ಅದ್ಧೂರಿಯಾಗಿ ಜರುಗಿತು- ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ:ಉತ್ತರ ಕರ್ನಾಟಕದ ಆರಾಧ್ಯ ದೈವವಾದ ನಗರದ ಸದ್ಗುರು ಸಿದ್ಧಾರೂಢ ಸ್ವಾಮೀಜಿಯ ಮಹಾ ರಥೋತ್ಸವ ಭಕ್ತ ಸಾಗರದ ಮಧ್ಯೆ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.

ರಥೋತ್ಸವದ ಹಾದಿಯುದ್ದಕ್ಕೂ ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ...ಸಿದ್ಧಾರೂಢಸ್ವಾಮಿ ಮಹಾರಾಜ್‌ ಕಿ ಜೈ... ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ... ಶಿವಾಯ ನಮಃ.. ಓಂ ನಮಃ ಶಿವಾಯ... ಹೀಗೆ ಅಜ್ಜನ ಸ್ಮರಿಸುತ್ತಿದ್ದ ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದವು.

ಸಂಜೆ 5.30ರ ಹೊತ್ತಿಗೆ ಮಠದ ಆವರಣಕ್ಕೆ ಸಿದ್ಧಾರೂಢರು ಮತ್ತು ಗುರುನಾಥಾರೂಢರ ಪಲ್ಲಕ್ಕಿ ಬರುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕಾರವಾರ ರಸ್ತೆಗೆ ಹೊಂದಿಕೊಂಡಂತಿರುವ ಮಠದ ಪ್ರವೇಶ ಗೋಪುರದವರೆಗೆ ಸಾಗಿದ ರಥ ಮರಳಿ ಮಠದ ಆವರಣವನ್ನು ಬಂದು ತಲುಪಿತು.

ADVERTISEMENT

ತೇರು ಮುಖ್ಯದ್ವಾರದವರೆಗೆ ಬಂದು, ಮರಳಿ ಹೋಗುವಾಗ ತೇರಿಗೆ ಮೇಲಿನಿಂದ ಹೂ ಮಳೆ ಸುರಿದಾಗ ಭಕ್ತರು ಜಯಘೋಷ ಹಾಕಿ ಸಂಭ್ರಮಿಸಿದರು. ರಥಕ್ಕೆ ಉತ್ತುತ್ತಿ, ಬಾಳೆ ಹಣ್ಣು ಹಾಗೂ ನಿಂಬೆ ಹಣ್ಣು ಎಸೆದು ಸಂಭ್ರಮಿಸಿದರು. ರಥದ ಹಾದಿಯುದ್ದಕ್ಕೂ ಹೆಜ್ಜೆಮೇಳ, ಡೊಳ್ಳು ಕುಣಿತ, ಹಲಗಿ ಬಡಿತದ ಜಾನಪದ ಕಲಾತಂಡಗಳು ಜಾತ್ರೆಗೆ ವಿಶೇಷ ಮೆರಗು ತಂದವು. ಎಲ್ಲರ ಬಾಯಲ್ಲೂ ಶಿವಾಯ ನಮಃ ಸ್ಮರಣೆ ಕೇಳಿ ಬರುತ್ತಿತ್ತು.

ಮನರಂಜನಾ ಆಟಗಳು, ಬಗೆ ಬಗೆಯ ಅಂಗಡಿಗಳು, ವಿಶೇಷ ತಿಂಡಿ–ತಿನಿಸುಗಳು ಭಕ್ತರನ್ನು ಸೆಳೆದವು. ವಿವಿಧ ಭಾಗಗಳಿಂದ ಎತ್ತಿನ ಬಂಡಿ ಟ್ರ್ಯಾಕ್ಟರ್‌ ಸೇರಿದಂತೆ ವಿವಿಧ ವಾಹನಗಳಲ್ಲಿ ಬಂದಿದ್ದ ಭಕ್ತರು ಜಾತ್ರೆಯನ್ನು ಕಣ್ತುಂಬಿಕೊಂಡರು. ರಾಜ್ಯವಷ್ಟೇ ಅಲ್ಲದೆ ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗ ಭಕ್ತರು ಜಾತ್ರೆಗೆ ಸಾಕ್ಷಿಯಾದರು.

ಪೊಲೀಸ್ ನಿಗಾ:

ರಥೋತ್ಸವದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸಲಾಯಿತು. ಪೊಲೀಸ್ ಕಮಾಂಡೊ ವಾಹನ ಬೆಳಿಗ್ಗೆಯಿಂದ ಸಂಜೆವರೆಗೆ ಮಠದ ಆವರಣದಲ್ಲಿ ಬೀಡು ಬಿಟ್ಟಿತ್ತು.

ಮಠವನ್ನು ಪ್ರವೇಶಿಸುವ ರಸ್ತೆಗಳಿಗೆ ದೂರದಲ್ಲೇ ಬ್ಯಾರಿಕೇಡ್‌ಗಳನ್ನು ಅಡ್ಡವಾಗಿ ಇಟ್ಟು ಬಂದ್ ಮಾಡಲಾಗಿತ್ತು. ಅಲ್ಲಿಲ್ಲಿ ಇದ್ದ ಪೊಲೀಸರ ಗುಂಪು ವಾಹನಗಳು ಒಳ ಪ್ರವೇಶಿಸದಂತೆ ತಡೆದು, ಭಕ್ತರ ಓಡಾಟ ಸರಾಗವಾಗಿರುವಂತೆ ನೋಡಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.