ಹುಬ್ಬಳ್ಳಿ: ಅಲ್ಪ ಮೊತ್ತದ ಗುರಿಯನ್ನು ಸುಲಭವಾಗಿ ಮುಟ್ಟಿದ ಧಾರವಾಡದ ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ತಂಡ, ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ 16 ವರ್ಷದ ಒಳಗಿನವರ ಅಂತರ ಕ್ಲಬ್ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಬಿಡಿಕೆ ಕೂಡ ನಾಲ್ಕರ ಘಟ್ಟ ತಲುಪಿದೆ.
ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿಯ ಚಾಂಪಿಯನ್ಸ್ ನೆಟ್ ತಂಡ 20.2 ಓವರ್ಗಳಲ್ಲಿ 48 ರನ್ ಗಳಿಸಲಷ್ಟೇ ಶಕ್ತವಾಯಿತು. ಎಸ್ಡಿಎಂ ತಂಡದ ಪ್ರಭು ಕಲ್ಲೊಳ್ಳಿ (6–2–8–5) ಹಾಗೂ ಆಯನ್ ತ್ರಿಪಾಠಿ (ಎರಡು) ಚುರುಕಿನ ಬೌಲಿಂಗ್ ಮಾಡಿದರು. ಪ್ರಭು ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು. ಈ ಗುರಿಯನ್ನು ಎಸ್ಡಿಎಂ 6.5 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ದಿನದ ಇನ್ನೊಂದು ಪಂದ್ಯದಲ್ಲಿ ಧಾರವಾಡದ ಫಸ್ಟ್ ಕ್ರಿಕೆಟ್ ಅಕಾಡೆಮಿ ವಿರುದ್ಧ ಬಿಡಿಕೆ ಗೆಲುವು ಸಾಧಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು. ಮೊದಲು ಬ್ಯಾಟ್ ಮಾಡಿದ ಫಸ್ಟ್ ತಂಡ 23.2 ಓವರ್ಗಳಲ್ಲಿ 80 ರನ್ ಗಳಿಸಿತು. ಬಿಡಿಕೆ ತಂಡದ ಬಸವರಾಜ ಕೆ. (4–0–16–3) ಪಂದ್ಯ ಶ್ರೇಷ್ಠ ಗೌರವ ಸಾಧಿಸಿದರು. ಈ ಗುರಿಯನ್ನು ಬಿಡಿಕೆ ತಂಡ 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿತು.
ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್–ಎಸ್ಡಿಎಂ (ಬೆಳಿಗ್ಗೆ 8.30ಕ್ಕೆ) ಮತ್ತು ಹುಬ್ಬಳ್ಳಿಯ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ–ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ (ಮ. 1.20) ಪೈಪೋಟಿ ನಡೆಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.