ADVERTISEMENT

ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ

ಅಕ್ಷರ– ಅನ್ನ ದಾಸೋಹಿಗೆ ಭಾರತ ರತ್ನ ನೀಡಿ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 14:23 IST
Last Updated 22 ಜನವರಿ 2019, 14:23 IST
ನವನಗರದ ಎಪಿಎಂಸಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಶಿವಾನಂದ ಎನ್ ಸಣ್ಣಕ್ಕಿ ಮಾತನಾಡಿದರು
ನವನಗರದ ಎಪಿಎಂಸಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಶಿವಾನಂದ ಎನ್ ಸಣ್ಣಕ್ಕಿ ಮಾತನಾಡಿದರು   

ಹುಬ್ಬಳ್ಳಿ: ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ವಿವಿಧ ಸಂಘ– ಸಂಸ್ಥೆಗಳು ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಿದವು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮತ್ತು ನಿವೃತ್ತ ನೌಕರರ ಸಂಘದಲ್ಲಿ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಎಚ್‌.ಜಿ. ಕೊಪ್ಪದ, ಪ್ರಧಾನ ಕಾರ್ಯದರ್ಶಿ ಎಂ.ಬಿ. ತಹಶೀಲ್ದಾರ್ ಇದ್ದರು.

ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ ಶಿವೈಕ್ಯರಾಗಿದ್ದು ನಾಡಿಗೆ ತುಂಬಲಾರದ ನಷ್ಟ ಎಂದು ಎಪಿಎಂಸಿ ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಶಿವಾನಂದ ಎನ್ ಸಣ್ಣಕ್ಕಿ ಹೇಳಿದರು. ಎಪಿಎಂಸಿ ಆವರಣದ ಕರ್ನಾಟಕ ವೃತ್ತದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ADVERTISEMENT

ಉಪಾಧ್ಯಕ್ಷ ಗಣೇಶ ಪಿ ಕಠಾರಿ, ಕಾರ್ಯದರ್ಶಿ ಮಲ್ಲಿಕಾರ್ಜುನ ವಿ. ಬೋರಟ್ಟಿ, ಸಹಕಾರ್ಯದರ್ಶಿ ಕಿಶೋರಕುಮಾರ ಎಮ್ ಪಟೇಲ, ಖಜಾಂಚಿ ಶ್ರೀಕಾಂತ ವಿ ಮಹಾಲೆ ಇದ್ದರು.

ಭಕ್ತರ ಪಾಲಿನ ನಡೆದಾಡುವ ದೇವರು ಶಿವಕುಮಾರ ಸ್ವಾಮಿಯವರಿಗೆ ಮೂರುಸಾವಿರಮಠದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಂಕರಣ್ಣ ಮುನವಳ್ಳಿ ಮಾತನಾಡಿ, ಸ್ವಾಮೀಜಿ ಅವರ ಕಾಯಕ ಸೇವೆಯು ಜನರಿಗೆ ದಾರಿದೀಪವಾಗಲಿ ಎಂದರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಸ್ವಾಮೀಜಿ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ದಿವ್ಯ ಚೇತನ. ಸಾವಿರಾರು ಮಕ್ಕಳಿಗೆ ಅಕ್ಷರ– ಅನ್ನ ನೀಡಿದ ದಾಸೋಹಿ ಎಂದರು.

ಸಮಾಜಕ್ಕಾಗಿ ಬದಕು ಮುಡಿಪಾಗಿಟ್ಟ ಸ್ವಾಮೀಜಿಗೆ ಭಾರತ ರತ್ನ ಲಭಿಸಲಿ ಪೂಜಾ ಸೇವಾ ಸಮಿತಿಯ ನಿರ್ದೇಶಕ ಅಮರೇಶ ಹಿಪ್ಪರಗಿ ಹೇಳಿದರು. ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು. ದಾಸೋಹ ಸಮಿತಿ ನಿರ್ದೇಶಕರಾದ ಕಾಡಯ್ಯ ಹಿರೇಮಠ, ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ, ವಿಜಯ ಶೆಟ್ಟರ, ಚನ್ನಬಸಪ್ಪ ಧಾರವಾಡಶೆಟ್ಟರು, ವಿರೇಶ ಸಂಗಳದ, ಎಸ್.ಎಸ್. ಪೊಲೀಸ್ ಪಾಟೀಲ, ವೀರಣ್ಣ ಕಲ್ಲೂರ, ರಾಜಣ್ಣ ಬತ್ಲಿ, ಬಸವರಾಜ ಮುಷ್ಠಿ, ಮಲ್ಲಿಕಾರ್ಜುನ ಕಳಸರಾಯ, ಸದಾಶಿವ ಚೌಶೆಟ್ಟಿ, ಕುಮಾರ ಕುಂದನಹಳ್ಳಿ ಉಪಸ್ಥಿತರಿದ್ದರು.

ಆಧ್ಯಾತ್ಮಿಕ ಲೋಕದ ದಿವ್ಯ ಚೇತನ ಶಿವಕುಮಾರ ಸ್ವಾಮೀಜಿ ಅವರಿಗೆ ಸೋನಿಯಾ ಗಾಂಧಿ ನಗರದ ಬಯಲು ಮಂಟಪದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ವಾಮೀಜಿ ಅವರ ಕಾರ್ಯಗಳು ಸೂರ್ಯ– ಚಂದ್ರ ಇರುವವರೆಗೂ ಇರುತ್ತವೆ ಎಂದು ಮಂಜುಳಾ ಹನುಮಂತಪ್ಪ ದೊಡ್ಡಮನಿ ಹೇಳಿದರು.

ಯಶೋದಾ ಮಲ್ಲಾರಿ, ರಮೇಶ ಧಾರವಾಡಕರ, ಹನುಮಂತಪ್ಪ ದೊಡ್ಡಮನಿ, ಸಿದ್ದಪ್ಪ ಮಿಸಿ, ಸುರೇಶ ಜಾಧವ, ರವಿ ಉಪ್ಪಾರ, ಮಂಜುನಾಥ ಹುಟಗಿ, ಮಂಜುನಾಥ ರಾಮಗೇರಿ, ವೆಂಕಟೇಶ ರೆಡ್ಡಿ ಇದ್ದರು.

ಆಟೊ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಸದಸ್ಯರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಭೆ ಏರ್ಪಡಿಸಿ ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಪ್ರಧಾನ ಕಾರ್ಯದರ್ಶಿ ಪುಂಡಲೀಕ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.