
ಹುಬ್ಬಳ್ಳಿಯ ಸಿದ್ಧಾರೂಢ ಮಠದ ಪುಷ್ಕರಣಿಯಲ್ಲಿ ಭಾನುವಾರ ಆರೂಢ ಆರತಿ ಭಕ್ತಿಭಾವದಿಂದ ನಡೆಯಿತು
ಹುಬ್ಬಳ್ಳಿ: ಇಲ್ಲಿನ ಶ್ರೀಸಿದ್ಧಾರೂಢಸ್ವಾಮಿ ಮಠದ ಪುಷ್ಕರಣಿಯಲ್ಲಿ ಭಾನುವಾರ ಆರೂಢ ಆರತಿಯು ಭಕ್ತರ ಹರ್ಷೋದ್ಘಾರದ ಮಧ್ಯೆ, ಭಕ್ತಿ, ಭಾವ ಹಾಗೂ ಸಂಭ್ರಮದಿಂದ ನಡೆಯಿತು.
ಗಂಗಾರತಿ ಮಾದರಿಯಲ್ಲಿ ಶ್ರೀಸಿದ್ಧಾರೂಢಸ್ವಾಮಿ ಮಠದಲ್ಲಿ ಪ್ರತಿ ಅಮವಾಸ್ಯೆಗೆ ಶ್ರೀಆರೂಢ ಆರತಿ ನಡೆಯುತ್ತದೆ. ಆರತಿ ಸಂದರ್ಭದಲ್ಲಿ ಶ್ರೀಸಿದ್ಧಾರೂಢ ಹಾಗೂ ಗುರುನಾಥರೂಢ ಮಹಾರಾಜ ಕೀ ಘೋಷಣೆ ಮೊಳಗಿದವು. ಭಕ್ತಿಗೀತೆ, ಢಮರು ನಾದದ ನಡುವೆ ಆರೂಢ ಆರತಿ ಅದ್ಧೂರಿಯಾಗಿ ನಡೆಯಿತು.
‘ಯುವ ಪೀಳಿಗೆಗೆ ಶ್ರೀಸಿದ್ಧಾರೂಢಸ್ವಾಮಿ ಅವರ ಜೀವನ ಚರಿತ್ರೆ, ಚಿಂತನೆಗಳನ್ನು ತೋರಿಸುವ ನಿಟ್ಟಿನಲ್ಲಿ ಶ್ರೀಸಿದ್ಧಾರೂಢಸ್ವಾಮಿ ಚಿತ್ರ ನಿರ್ಮಾಣ ಮಾಡುವುದಾಗಿ ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ ಘೋಷಿಸಿದರು. ಅದಕ್ಕೆ ಶ್ರೀಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಅವರು ದನಿಗೂಡಿಸಿ, ಚಿತ್ರ ನಿರ್ಮಿಸುವುದಾಗಿ‘ ಭರವಸೆ ನೀಡಿದರು.
ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿಸಿಪಿ ಮಹಾನಿಂಗ ನಂದಗಾವಿ ಅತಿಥಿಯಾಗಿ ಪಾಲ್ಗೊಂಡಿದ್ದರು. ವೈಸ್ ಚೇರಮನ್ ವಿನಾಯಕ ಘೋಡಕೆ, ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಡಾ.ಗೋವಿಂದ ಮಣ್ಣೂರ, ಉದಯಕುಮಾರ ನಾಯಕ, ಬಾಳು ಮಗಜಿಕೊಂಡಿ, ಗೀತಾ ಕಲಬುರಗಿ, ಬಸವರಾಜ ಕಲ್ಯಾಣಶೆಟ್ಟರ್, ಮಂಜುನಾಥ ಮುನವಳ್ಳಿ, ವ್ಯವಸ್ಥಾಪಕ ಈರಣ್ಣ ತುಪ್ಪದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.