ADVERTISEMENT

ಯಶವಂತರ ಕನಸಿನ ಕೂಸು ‘ಆದಿರಂಗ’

ಯಶವಂತ ಸರದೇಶಪಾಂಡೆ ನಿಧನ: ಒಡನಾಡಿಗಳ ನುಡಿನಮನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 6:02 IST
Last Updated 30 ಸೆಪ್ಟೆಂಬರ್ 2025, 6:02 IST
ಹುಬ್ಬಳ್ಳಿ ಲೋಹಿಯಾ ನಗರದಲ್ಲಿ ನಿರ್ಮಿಸಿದ್ದ ‘ಆದಿರಂಗ ಥಿಯೇಟರ್‌’ ಅನ್ನು 2020ರ ಜನವರಿಯಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಉದ್ಘಾಟಿಸಿದ್ದರು. ಕಲಾವಿದ ಪ್ರವೀಣ ಗೋಡ್ಕಿಂಡಿ, ಯಶವಂತ ಸರದೇಶಪಾಂಡೆ ಹಾಜರಿದ್ದರು (ಸಂಗ್ರಹ ಚಿತ್ರ)
ಹುಬ್ಬಳ್ಳಿ ಲೋಹಿಯಾ ನಗರದಲ್ಲಿ ನಿರ್ಮಿಸಿದ್ದ ‘ಆದಿರಂಗ ಥಿಯೇಟರ್‌’ ಅನ್ನು 2020ರ ಜನವರಿಯಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಉದ್ಘಾಟಿಸಿದ್ದರು. ಕಲಾವಿದ ಪ್ರವೀಣ ಗೋಡ್ಕಿಂಡಿ, ಯಶವಂತ ಸರದೇಶಪಾಂಡೆ ಹಾಜರಿದ್ದರು (ಸಂಗ್ರಹ ಚಿತ್ರ)   

ಹುಬ್ಬಳ್ಳಿ: ರಂಗಭೂಮಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದವರು ಯಶವಂತ ಸರದೇಶಪಾಂಡೆ. ವಿಭಿನ್ನ ಪ್ರಯೋಗಗಳ ಮೂಲಕವೂ ಪ್ರೇಕ್ಷಕರನ್ನು ರಂಜಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. 

ಇಲ್ಲಿನ ನವನಗರದ ಯಶವಂತ ಅವರು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಲೋಹಿಯಾನಗರದಲ್ಲಿ ಆದಿರಂಗ ಥಿಯೇಟರ್‌ ನಿರ್ಮಿಸಿದ್ದು, ರಂಗಾಸಕ್ತರಿಗೆ ತರಬೇತಿ ನೀಡುತ್ತಿದ್ದರು. ಬೆಂಗಳೂರು ಸೇರಿ ಹುಬ್ಬಳ್ಳಿ–ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ತಂಡದ ಜತೆ ನಾಟಕ ಪ್ರದರ್ಶನ ಮಾಡುತ್ತಿದ್ದರು. ಉತ್ತರ ಕರ್ನಾಟಕ ಭಾಗದ ಭಾಷೆಯಲ್ಲಿಯೇ ಪ್ರೇಕ್ಷಕರನ್ನು ಆಕರ್ಷಿಸಿತ್ತು.

‘ಲೋಹಿಯಾ ನಗರದಲ್ಲಿರುವ ಆದಿರಂಗ ಥಿಯೇಟರ್‌ ಯಶವಂತರ ಬಹುದೊಡ್ಡ ಕನಸಾಗಿತ್ತು. ರಂಗಭೂಮಿಗೆ ಅಗತ್ಯವಾದ ಎಲ್ಲ ಆಧುನಿಕ ಸೌಲಭ್ಯಗಳನ್ನು ಅದು ಒಳಗೊಂಡಿರಬೇಕು ಎಂದು ಅವರು ಬಯಸಿದ್ದರು. ಅದಕ್ಕೆ ಪೂರಕವಾಗಿ ಸುಸಜ್ಜಿತ ರಂಗಮಂದಿರ, ಲೈಟ್‌, ಸೌಂಡ್‌ ಸಿಟ್ಟಮ್‌, ಗ್ರೀನ್‌ ರೂಮ್‌, ಗ್ರಂಥಾಲಯ, ಆಡಿಯೊ–ವಿಡಿಯೊ ಸಭಾಭವನ, ವಸತಿಗೃಹ, ಯೋಗ–ಧ್ಯಾನ ಕೇಂದ್ರ, ಕ್ಯಾಂಟೀನ್‌ ನಿರ್ಮಿಸಿದ್ದರು. ಅಲ್ಪಾವಧಿ, ದೀರ್ಘಾವಧಿ ತರಬೇತಿ ಶಿಬಿರ ನಡೆಸಿ, ರಂಗಭೂಮಿಗೆ ಹೊಸ ಆಯಾಮ ನೀಡಬೇಕು ಎಂಬ ಕನಸು ಹೊತ್ತಿದ್ದರು’ ಎಂದು ರಂಗ ನಿರ್ದೇಶಕ ವಿಶ್ವನಾಥ ಕುಲಕರ್ಣಿ ಸ್ಮರಿಸಿದರು.

ADVERTISEMENT

‘ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿರುವ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ, ಪ್ರೇಕ್ಷಕರ ಮುಂದೆ ಪ್ರದರ್ಶಿಸಿ ಯಶಸ್ವಿಯಾದ ಏಕೈಕ ರಂಗ ಕಲಾವಿದ ಯಶವಂತ ಸರದೇಶಪಾಂಡೆ. ಅವರನ್ನು ಕಳೆದುಕೊಂಡಿರುವುದು ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟ. ಹದಿನೈದು ದಿನಗಳ ಹಿಂದಷ್ಟೇ ಧಾರವಾಡದ ರಂಗಾಯಣಕ್ಕೆ ಬಂದು ನಾಟಕದ ಬಗ್ಗೆ ಚರ್ಚೆ ಮಾಡಿ, ಹೊರದೇಶಕ್ಕೆ ಹೋಗುವ ಯೋಜನೆ ಬಗ್ಗೆ ಹೇಳಿದ್ದರು’ ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ ನೆನಪಿಸಿಕೊಂಡರು.

ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ, ‘ಹಾಸ್ಯದ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಯಶವಂತ ಅವರು, ಸಾಹಿತ್ಯದ ಬಗ್ಗೆಯೂ ಒಲವು ಹೊಂದಿದ್ದರು. ರಂಗಭೂಮಿ ಕ್ಷೇತ್ರದ ಕುರಿತು ನಮ್ಮ ಪ್ರಕಾಶನದಲ್ಲಿಯೇ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದರು’ ಎಂದರು.

‘ಭರವಸೆಯ ರಂಗಕರ್ಮಿಯಾಗಿದ್ದರು’

‘ಕನ್ನಡ ರಂಗಭೂಮಿಗೆ ಮೊತ್ತೊಮ್ಮ ಬಿ.ವಿ. ಕಾರಂತರಂತೆ ಕಂಡು ಬಂದಿದ್ದು ಯಶವಂತ ಸರದೇಶಪಾಂಡ. ಅನೇಕ ಭಾಷೆಗಳ ಶ್ರೇಷ್ಠ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಹಾಸ್ಯದ ಮೂಲಕ ತೆರೆದಿಡುತ್ತಿದ್ದರು’ ಎಂದು ರಂಗಕರ್ಮಿ ಮಾಜಿ ಮೇಯರ್‌ ಪಾಡುರಂಗ ಪಾಟೀಲ ಹೇಳಿದರು. ‘1975ರಲ್ಲಿ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿ ಲಯನ್ಸ್ ಕ್ಲಬ್‌ ನಾಟಕ ಸ್ಪರ್ಧೆ ಏರ್ಪಡಿಸಿತ್ತು. ಅಲ್ಲಿ ನಾಟಕ ಸಂಘಟನೆಯೊಂದಿಗೆ ಸಕ್ರಿಯವಾಗಿ  ಭಾಗವಹಿಸಿದ್ದ ಯಶವಂತ ನಿರ್ದೇಶನ ಬೆಳಕು ಸಂಯೋಜನೆ ನಟನೆ ಮಾಡಿ ಎಲ್ಲರನ್ನು ನಗಿಸಿ ಮೆಚ್ಚುಗೆ ಪಡೆದಿದ್ದ. ಅವರು ಭರವಸೆಯ ರಂಗಕರ್ಮಿಯಾಗಿದ್ದರು’ ಎಂದರು.

- ‘ಸಾಯೂದ ಖರೆ ಅಂದಮ್ಯಾಗ...

’ ‘ಯಶವಂತ ಸರದೇಶಪಾಂಡೆ ಅವರಿಗೆ ಒಮ್ಮೆ ಲಘು ಹೃದಯಾಘಾತ ಆಗಿತ್ತು. ಆ ಕುರಿತು ಅವರು ಫೇಸ್‌ಬುಕ್‌ ಖಾತೆಯಲ್ಲಿ ಹಾಸ್ಯಭರಿತವಾಗಿ ಬರೆದುಕೊಂಡಿದ್ದರು. ಅವರಿಗೆ ಕರೆ ಮಾಡಿ ಸಂಪರ್ಕಿಸಿ ‘ಗಂಭೀರ ವಿಷಯವನ್ನು ಹೀಗೆ ಹೇಳಿದ್ದಿರಲ್ಲಾ ಸರ್‌?’ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ‘ನನಗೆ ನಗಿಸೋದನ್ನ ಬಿಟ್ರೆ ಏನೂ ಬರೋದಿಲ್ಲ. ಅದೇ ನನ್ನನ್ನ ಎಷ್ಟೋ ವರ್ಷಗಳಿಂದ ಸಲುಹುತ್ತಿದೆ. ಸಾಯೂದ ಖರೆ ಅಂದಮ್ಯಾಗ ನಕ್ಕೋತ ಸಾಯೋದ್ರೊಳಗ ಏನ ತಪ್ಪೈತ್ರಿ’ ಎಂದಿದ್ದರು’ ಎಂದು ಪೊಲೀಸ್‌ ಸಿಬ್ಬಂದಿ ಸಾಹಿತಿ ಸೋಮು ರೆಡ್ಡಿ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.