ಧಾರವಾಡದಲ್ಲಿ 2014ರಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಸಾಹಿತಿ ಎಸ್.ಎಲ್ಭೈರಪ್ಪ, ಕವಿ ಚನ್ನವೀರ ಕಣವಿ ಹಾಗೂ ಸಂಶೋಧಕ ಎಂ.ಎಂ.ಕಲಬುರ್ಗಿ ಮಾತುಕತೆಯಲ್ಲಿ ತೊಡಗಿದ್ದು ಬಿ.ಎಂ.ಕೇದಾರನಾಥ
ಪ್ರಜಾವಾಣಿ ಚಿತ್ರ
ಧಾರವಾಡ: ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೆ ಧಾರವಾಡದ ಒಡನಾಟ ಇತ್ತು. ‘ಸಾಹಿತ್ಯ ಸಂಭ್ರಮ’ ಸಹಿತ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಭೈರಪ್ಪ ಅವರು ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್ ಮೊದಲಾದ ಮಹನೀಯರ ಸಂಗೀತಧಾರೆಯನ್ನು ಇಲ್ಲಿ ಆಲಿಸಿದ್ದಾರೆ. ದ.ರಾ.ಬೇಂದ್ರ ಟ್ರಸ್ಟ್ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ 2020ರಲ್ಲಿ ಭೈರಪ್ಪ ಅವರಿಗೆ ಸಂದಿತ್ತು.
ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲ್ಯಾಣಗರದ ಮಹಿಮಾಲೋಕದಲ್ಲಿ 2024ಸೆಪ್ಟೆಂಬರ್ 19ರಂದು ನಡೆದಿದ್ದ ‘ಭೈರಪ್ಪನವರೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.
‘ತತ್ವಶಾಸ್ತ್ರ ಓದಿದರೆ ಜೀವನದ ಸಮಸ್ಯೆಗಳು ತಿಳಿಯುತ್ತವೆ. ತತ್ವಶಾಸ್ತ್ರ ಅಧ್ಯಯನ ಮಾಡಿದ್ದರಿಂದ ಕಾದಂಬರಿಗಳನ್ನು ಬರೆಯಲು ಸಾಧ್ಯವಾಯಿತು’ ಎಂದು ಭೈರಪ್ಪ ಅವರು ಆ ಕಾರ್ಯಕ್ರಮದಲ್ಲಿ ಹೇಳಿದ್ದರು.
‘ಭೈರಪ್ಪ ಅವರಿಗೆ ಸಂಗೀತ ಪ್ರೀತಿ ಇತ್ತು. ಕಲಾ ಭವನ, ಇತರೆಡೆ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ವಿಷಯಗಳ ಕುರಿತು ವರ್ಷಾನುಗಟ್ಟಲೇ ಹುಡುಕಿ ಮಾಹಿತಿ ಸಂಗ್ರಹಿಸಿ ಕಾದಂಬರಿ ಬರೆಯುತ್ತಿದ್ದರು. ಅವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಅವರ ಕಾದಂಬರಿಗಳು ಮರಾಠಿ, ಹಿಂದಿ ಇತರ ಭಾಷೆಗಳಿಗೆ ಅನುವಾದವಾಗಿವೆ’ ಎಂದು ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭೈರಪ್ಪ ಅವರಿಗೆ ಹುಬ್ಬಳ್ಳಿ–ಧಾರವಾಡದ ಜತೆ ಒಳ್ಳೆಯ ನಂಟು ಇತ್ತು. ಗಂಗೂಬಾಯಿ ಹಾನಗಲ್ ಅವರ ಸಂಗೀತ, ರೆಹಮತ್ ಖಾನ್ ಅವರ ಸಿತಾರ್ ವಾದನ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಿಂದೂಸ್ತಾನಿ ಸಂಗೀತದ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು’ ಎಂದು ಕಲಾವಿದ ಶಶಿಧರ ನರೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.