ADVERTISEMENT

ಹುಬ್ಬಳ್ಳಿ | ಸ್ಮಾರ್ಟ್‌ ಸಿಟಿ ಕಾಮಗಾರಿ ಆರಂಭ, ಕಾರ್ಮಿಕರ ಸುರಕ್ಷತೆಗೆ ಒತ್ತು

ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿತು ಕೆಲಸ

​ಪ್ರಜಾವಾಣಿ ವಾರ್ತೆ
Published 10 ಮೇ 2020, 19:30 IST
Last Updated 10 ಮೇ 2020, 19:30 IST
ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶ ಕುಮಾರೇಶ್ವರ ನಗರದಲ್ಲಿ ರಸ್ತೆ ಕೆಲಸ ಮಾಡುವ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಕಾಮಗಾರಿ ಮೇಲ್ವಿಚಾರಕ
ಹುಬ್ಬಳ್ಳಿಯ ಕೈಗಾರಿಕಾ ಪ್ರದೇಶ ಕುಮಾರೇಶ್ವರ ನಗರದಲ್ಲಿ ರಸ್ತೆ ಕೆಲಸ ಮಾಡುವ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಕಾಮಗಾರಿ ಮೇಲ್ವಿಚಾರಕ   

ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ವಾಣಿಜ್ಯನಗರಿಯಲ್ಲಿ ಸ್ಥಗಿತಗೊಂಡಿದ್ದ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳ ಪೈಕಿ, ಇದೀಗ, ನಾಲ್ಕು ಪುನರಾರಂಭಗೊಂಡಿವೆ. ಕೊರೊನಾ ಭೀತಿಯಿಂದಾಗಿ ಕಾಮಗಾರಿಗಳು ನಿಂತಿದ್ದರಿಂದ ಕಂಗಾಲಾಗಿದ್ದ ಕಾರ್ಮಿಕರಿಗೆ ಕೆಲಸ ಸಿಕ್ಕಿದ್ದು, ಬದುಕಿನ ಬಂಡಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

ನಗರದ ತೋಳನ ಕೆರೆ ಉದ್ಯಾನ ಅಭಿವೃದ್ಧಿ, ರಾಮಲಿಂಗೇಶ್ವರ ನಗರ, ಕೈಗಾರಿಕಾ ಪ್ರದೇಶವಾದ ಕುಮಾರೇಶ್ವರ ನಗರ ಹಾಗೂ ಮಂಜುನಾಥ ನಗರದಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಮತ್ತೊಂದೆಡೆ, ಕಂಟೈನ್‌ಮೆಂಟ್ ವ್ಯಾಪ್ತಿ ಸೇರಿರುವ ತಬೀಬಲ್ಯಾಂಡ್, ತೊರವಿ ಗಲ್ಲಿ ಹಾಗೂ ಬೆಂಗೇರಿಯಲ್ಲಿ ನಡೆಯುತ್ತಿದ್ದ ಕೆಲಸಗಳನ್ನು ನಿಲ್ಲಿಸಲಾಗಿದೆ.

ಶೇ 50ರಷ್ಟು ಕಾರ್ಮಿಕರು:‘ಕಾಮಗಾರಿಗಳನ್ನು ಶೇ 50ರಷ್ಟು ಕಾರ್ಮಿಕರೊಂದಿಗೆ ಆರಂಭಿಸಬೇಕು ಎಂದು ಸೂಚನೆ ಮೇರೆಗೆ ಕೆಲಸಗಳು ಆರಂಭಗೊಂಡಿವೆ. ಲಾಕ್‌ಡೌನ್‌ಗೆ ಮುಂಚೆಯೇ ಯುಗಾದಿ ಹಬ್ಬದ ನಿಮಿತ್ತ ಕೆಲ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದರು. ಸದ್ಯ ಸ್ಥಳೀಯವಾಗಿ ಲಭ್ಯವಿರುವ ಶೇ 50ರಷ್ಟು ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ’ ಎಂದು ಸ್ಮಾರ್ಟ್ ಸಿಟಿ ಕಂಪನಿಯ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸದ್ಯ ನಡೆಯುತ್ತಿರುವ ಕಾಮಗಾರಿಗಳಿಗೆ ಅಗತ್ಯವಿರುವಷ್ಟು ಕಾರ್ಮಿಕರು ಲಭ್ಯವಿದ್ದಾರೆ. ಮುಂದೆ ಲಾಕ್‌ಡೌನ್ ನಿಯಮಗಳು ಮತ್ತಷ್ಟು ಸಡಿಲಗೊಂಡರೆ, ತಮ್ಮ ಊರುಗಳಿಗೆ ಹೋಗಿ ಸಿಲುಕಿಕೊಂಡಿರುವ ಕಾರ್ಮಿಕರು ಕೂಡ ಬಂದು ಸೇರಿಕೊಳ್ಳಲಿದ್ದಾರೆ. ಆಗ ಕೆಲಸಗಳು ಮತ್ತಷ್ಟು ಚರುಕುಗೊಳ್ಳಲಿವೆ’ ಎಂದು ಹೇಳಿದರು.

ನಿತ್ಯ ತಪಾಸಣೆ:‘ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡು ಕಾಮಗಾರಿಗಳನ್ನು ಆರಂಭಿಸಲಾಗಿದೆ. ನಿತ್ಯ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಅಗತ್ಯವಿರುವವರಿಗೆ ಆರೋಗ್ಯ ತಪಾಸಣೆಯೂ ಮಾಡುವಂತೆ ಸೂಚನೆ ನೀಡಲಾಗಿದೆ. ಕಾರ್ಮಿಕರು ಮಾಸ್ಕ್ ಧರಿಸಿಯೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ವಿತರಿಸಲಾಗಿದೆ’ ಎಂದು ನರೇಗಲ್ ಹೇಳಿದರು.

‘ಸ್ಮಾರ್ಟ್‌ ಸಿಟಿ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಗೂಗಲ್ ಸ್ಪ್ರೆಡ್‌ಶೀಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತಿದೆ. ಆ ಮೂಲಕ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಾವಿರುವ ಜಾಗದಲ್ಲೇ ಕಾಮಗಾರಿ ಪ್ರಗತಿ, ಕೈಗೊಂಡಿರುವ ಸುರಕ್ಷತಾ ಕ್ರಮ, ಎಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂಬ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.