ಹುಬ್ಬಳ್ಳಿ: ‘ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರ ನಡೆ ವಿವಾದಕ್ಕೆ ಆಸ್ಪದವಾಗಿದೆ. ಸಭಾಧ್ಯಕ್ಷರ ಕಚೇರಿಯಿಂದ ನಡೆದ ಕಾಮಗಾರಿಗಳಲ್ಲಿ ಹಗರಣಗಳ ವಾಸನೆ ಕಂಡು ಬರುತ್ತಿದೆ. ಕೂಡಲೇ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾಲಮಿತಿ ಅನುಸರಿಸಿ ತನಿಖೆ ನಡೆಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
‘ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಂವಿಧಾನಬದ್ಧವಾದ ಈ ಪೀಠಕ್ಕೆ ಅಗೌರವ ತರುವ ಕಾರ್ಯ ನಡೆಯುತ್ತಿದೆ. ಸಭಾಪತಿ ಪೀಠಕ್ಕೆ ಇರುವ ಪರಮಾಧಿಕಾರ ಇನ್ಯಾವುದಕ್ಕೂ ಇರುವುದಿಲ್ಲ. ಈ ಪೀಠಕ್ಕೆ ಯು.ಟಿ. ಖಾದರ ಅವರಿಂದಾಗಿ ಕಳಂಕ ಬರುವಂತಾಗಿದೆ. ಸಂವಿಧಾನ ಬದ್ಧವಾದ ಸ್ಥಾನವು ವಿವಾದದ ಕೇಂದ್ರವಾಗುತ್ತಿದೆ. ಸಭಾಧ್ಯಕ್ಷರ ಕಚೇರಿಯನ್ನೂ ಆರ್ಟಿಐ ವ್ಯಾಪ್ತಿಗೆ ತರಬೇಕು’ ಎಂದರು.
‘ಸಣ್ಣ ಕಾರಣಕ್ಕಾಗಿ 2023ರಲ್ಲಿ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿದ್ದರು. ಕಳೆದ ಮಾರ್ಚ್ನಲ್ಲಿ ಕೂಡಾ 15 ಶಾಸಕರನ್ನು ಅಮಾನತು ಮಾಡಿದ್ದರು. ಈ ರೀತಿಯಲ್ಲಿ ಶಿಕ್ಷೆ ಕೊಡುವ ಅಧಿಕಾರ ಸ್ಪೀಕರ್ ಅವರಿಗೆ ಇರುವುದಿಲ್ಲ. ಇದು ಸಂವಿಧಾನ ವಿರೋಧಿ ನಡೆ. ಒಟ್ಟಾರೆ ಅವರ ನಡವಳಿಕೆ ನಿಷ್ಪಕ್ಷಪಾತದಿಂದ ಕೂಡಿಲ್ಲ’ ಎಂದು ದೂರಿದರು.
‘ಸಮಾವೇಶದ ಹೆಸರಿನಲ್ಲಿ ಬೇರೆ ಬೇರೆ ದೇಶಗಳಿಗೆ ವಿಧಾನಸಭೆ ಅಧ್ಯಕ್ಷರು ಪ್ರವಾಸ ಮಾಡುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ದುಂದು ವೆಚ್ಚ ಮಾಡುತ್ತಿರುವುದು ಗೊತ್ತಾಗುತ್ತಿದೆ. ಇವೆಲ್ಲದರ ಸತ್ಯಾಸತ್ಯತೆ ಜನರಿಗೆ ತಿಳಿಯಬೇಕಾಗಿದೆ. ಹೀಗಾಗಿ ಸ್ಪೀಕರ್ ಕಚೇರಿಯನ್ನೂ ಆರ್ಟಿಐ ವ್ಯಾಪ್ತಿಗೆ ತರಬೇಕು’ ಎಂದು ಒತ್ತಾಯಿಸಿದರು.
ದುಪ್ಪಟ್ಟು ಖರ್ಚು: ‘ಶಾಸಕರ ಭವನದ ಉನ್ನತೀಕರಣದ ಹೆಸರಿನಲ್ಲಿ ದುಪ್ಪಟ್ಟು ಖರ್ಚು ಹಾಕಲಾಗಿದೆ. ಹಣಕಾಸು ಇಲಾಖೆಯ ಅನುಮತಿ ಪಡೆದಿರುವುದಿಲ್ಲ. ಇದರಲ್ಲಿ ಮುಖ್ಯಮಂತ್ರಿ ಕೂಡಾ ಭಾಗಿಯಾದ ಅನುಮಾನ ಮೂಡುತ್ತಿದೆ’ ಎಂದರು.
ಆರ್ಎಸ್ಎಸ್ ನಿರ್ಬಂಧ ಅಸಾಧ್ಯ: ‘ಆರ್ಎಸ್ಎಸ್ ನಿರ್ಬಂಧಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿದೆ’ ಎಂದು ದೂರಿದರು.
‘ದೇಶವೇ ಮೊದಲು ಎನ್ನುವ ಧ್ಯೇಯ ಇಟ್ಟುಕೊಂಡು 1925ರಿಂದಲೂ ಆರ್ಎಸ್ಎಸ್ ನಡೆದುಕೊಂಡು ಬಂದಿದ್ದು, ಯಾರಿಗೂ ತೊಂದರೆ ಕೊಟ್ಟಿಲ್ಲ. ಶತಮಾನದ ಇತಿಹಾಸ ಹೊಂದಿರುವ ಆರ್ಎಸ್ಎಸ್ ನಿರ್ಬಂಧಿಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ. ಆರ್ಎಸ್ಎಸ್ ಶಾಖೆಗೆ ಹೋಗಿ ಅಲ್ಲಿನ ಅನುಭವ ಪಡೆದುಕೊಂಡು ಆನಂತರ ಮಾತನಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.